ಪುತ್ತೂರು:* ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ವೇಗ ನೀಡಲು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಮುಂದಾಗಿದೆ. ಶೌಚಾಲಯ, ಭೋಜನಾಲಯ ವಿಸ್ತರಣೆ, ವಿಐಪಿ ಲಾಂಜ್, ರಥಮಂದಿರ ಹಾಗೂ ಹಾಲ್ ಸೇರಿದಂತೆ ಐದು ಪ್ರಮುಖ ಕಾಮಗಾರಿಗಳನ್ನು ಏಕಕಾಲದಲ್ಲಿ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪುತ್ತೂರು ಶಾಸಕ ಹಾಗೂ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸೆ. 8ರಂದು ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಇಂಜಿನಿಯರ್ಗಳೊಂದಿಗೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಭೆ ನಡೆಸಿದ ಬಳಿಕ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಮುಂದಿನ ಹತ್ತು ದಿನಗಳೊಳಗೆ ಕಾಮಗಾರಿಗಳಿಗೆ ಚಾಲನೆ ನೀಡುವ ಗುರಿ ಹೊಂದಲಾಗಿದೆ. ಕಾಮಗಾರಿಗಳಿಗೆ ಕೋಟೇಶನ್ ಆಹ್ವಾನಿಸಿ, ಏಳು ದಿನಗಳ ಕಾಲಾವಕಾಶ ನೀಡಿದ ಬಳಿಕ ಗುತ್ತಿಗೆದಾರರನ್ನು ಅಂತಿಮಗೊಳಿಸಲಾಗುವುದು. ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಗುತ್ತಿಗೆದಾರರನ್ನು ನೇಮಿಸುವ ಉದ್ದೇಶವಿದೆ ಎಂದು ಹೇಳಿದರು.
3.5 ಕೋಟಿ ರೂ. ವೆಚ್ಚದಲ್ಲಿ ಗ್ರಾನೈಟ್ ಅಳವಡಿಕೆ
ದೇವಸ್ಥಾನದ ಹೊರಾಂಗಣ, ಹಾಲ್ ಮತ್ತು ವಾಶ್ರೂಮ್ಗಳಿಗೆ ಉತ್ತಮ ಗುಣಮಟ್ಟದ 30 ಎಂ.ಎಂ. ಗ್ರಾನೈಟ್ ಅಳವಡಿಸಲು ಸುಮಾರು 3.5 ಕೋಟಿ ರೂ. ವೆಚ್ಚವಾಗಲಿದೆ. ಭಾರೀ ವಾಹನಗಳು ಸಂಚರಿಸಿದರೂ ಹಾನಿಯಾಗದಂತೆ ಗಟ್ಟಿಮುಟ್ಟಾದ ಗ್ರಾನೈಟ್ ಅಳವಡಿಸಲು ಯೋಜಿಸಲಾಗಿದೆ.
ಈ ಸಂಬಂಧ ಬೆಂಗಳೂರಿನಲ್ಲಿ 15 ಉದ್ಯಮಿಗಳನ್ನು ಭೇಟಿಯಾಗಿದ್ದು, ಉದ್ಯಮಿಗಳು ಸ್ವಯಂಪ್ರೇರಿತವಾಗಿ ಸುಮಾರು 3 ಕೋಟಿ ರೂ. ಮೌಲ್ಯದ ಗ್ರಾನೈಟ್ ಒದಗಿಸುವ ಭರವಸೆ ನೀಡಿದ್ದಾರೆ ಎಂದು ಅಶೋಕ್ ರೈ ತಿಳಿಸಿದರು.
25 ಸಾವಿರ ಭಕ್ತರಿಗೆ ಅನ್ನಪ್ರಸಾದದ ಗುರಿ
ದೇವಸ್ಥಾನದ ಅನ್ನಛತ್ರವನ್ನು ಮತ್ತಷ್ಟು ವಿಸ್ತರಿಸಿ ಮುಂದಿನ ದಿನಗಳಲ್ಲಿ ಏಕಕಾಲದಲ್ಲಿ 25 ಸಾವಿರ ಭಕ್ತರಿಗೆ ಅನ್ನಪ್ರಸಾದ ನೀಡುವ ಸಾಮರ್ಥ್ಯ ಕಲ್ಪಿಸುವ ಗುರಿ ಹೊಂದಲಾಗಿದೆ. ಇದು ಹಲವು ವರ್ಷಗಳ ಕನಸಾಗಿದ್ದು, ಅದನ್ನು ಸಾಕಾರಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ವಿಐಪಿ ಲಾಂಜ್ ಹಾಗೂ ಶೌಚಾಲಯ ನಿರ್ಮಾಣಕ್ಕೆ ತಲಾ 50 ಲಕ್ಷ ರೂ. ವೆಚ್ಚವಾಗುವ ನಿರೀಕ್ಷೆಯಿದ್ದು, ಈ ಕಾಮಗಾರಿಗಳಿಗೆ ದಾನಿಗಳು ಹಾಗೂ ಭಕ್ತರು ಸಹಕಾರ ನೀಡುವಂತೆ ಮನವಿ ಮಾಡಿದರು.
15 ಕೋಟಿ ರೂ. ವೆಚ್ಚದಲ್ಲಿ ಕಮರ್ಷಿಯಲ್ ಕಾಂಪ್ಲೆಕ್ಸ್
ದೇವಸ್ಥಾನದ ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಕಾಮಗಾರಿಯನ್ನು ಒಂದು ತಿಂಗಳೊಳಗೆ ಆರಂಭಿಸುವ ಗುರಿ ಹೊಂದಲಾಗಿದೆ. ಸರ್ಕಾರದಿಂದ 10 ಕೋಟಿ ರೂ. ಅನುದಾನ ಹಾಗೂ ಸಚಿವರ ಮೂಲಕ 5 ಕೋಟಿ ರೂ. ಸೇರಿದಂತೆ ಒಟ್ಟು 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಅಶೋಕ್ ರೈ ಹೇಳಿದರು. ದೇವಸ್ಥಾನದ ರಸ್ತೆಯ ಸಮಗ್ರ ಅಭಿವೃದ್ಧಿ ಕಾಮಗಾರಿಯೂ ಒಂದು ತಿಂಗಳೊಳಗೆ ಆರಂಭವಾಗಲಿದೆ. ಕೆರೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, 15 ದಿನಗಳೊಳಗೆ ಕಾಮಗಾರಿ ಆರಂಭಿಸುವ ನಿರೀಕ್ಷೆಯಿದೆ. ಹೊಸ ಹಾಲ್ ನಿರ್ಮಾಣದ ಸಂದರ್ಭದಲ್ಲಿ ಹಾಲಿ ಇರುವ ಹಾಲ್ ಅನ್ನು ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
‘ಅಪವಾದಗಳಿಗೆ ಕಿವಿಗೊಡಬೇಡಿ’
ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಹರಿದಾಡುವ ತಪ್ಪು ಮಾಹಿತಿ ಹಾಗೂ ಅಪವಾದಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಅಶೋಕ್ ಕುಮಾರ್ ರೈ ಮನವಿ ಮಾಡಿದರು.“ಮಹಾಲಿಂಗೇಶ್ವರ ದೇವರಿಗೆ ನಾನು ವೈಯಕ್ತಿಕವಾಗಿ ಒಂದು ಕೋಟಿ ರೂಪಾಯಿ ನೀಡುತ್ತೇನೆ. ಈಗಾಗಲೇ 20 ಲಕ್ಷ ರೂ. ನೀಡಿದ್ದು, ಮುಂದಿನ ಹತ್ತು ದಿನಗಳಲ್ಲಿ ಇನ್ನೂ 25 ಲಕ್ಷ ರೂ. ನೀಡುತ್ತೇನೆ. 100 ಗ್ರಾಂ ಚಿನ್ನವನ್ನೂ ಈಗಾಗಲೇ ಅರ್ಪಿಸಿದ್ದೇನೆ,” ಎಂದು ಅವರು ಹೇಳಿದರು.
ದೇವಸ್ಥಾನದ ಸೇವೆ ಮಾಡುವುದು ಮತ್ತು ದೇವರ ಸಂಪತ್ತನ್ನು ದೇವರಿಗೆ ಸಮರ್ಪಿಸುವುದೇ ತಮ್ಮ ಉದ್ದೇಶವಾಗಿದ್ದು, ಯಾವುದೇ ವೈಯಕ್ತಿಕ ಅಪೇಕ್ಷೆ ಇಲ್ಲ ಎಂದು ಸ್ಪಷ್ಟಪಡಿಸಿದರು. ತಮ್ಮನ್ನೂ ಒಳಗೊಂಡಂತೆ ವ್ಯವಸ್ಥಾಪನಾ ಸಮಿತಿ ಸದಸ್ಯರಿಗೆ ದೇವಸ್ಥಾನದ ಅಭಿವೃದ್ಧಿಯೊಂದೇ ಮುಖ್ಯ ಗುರಿಯಾಗಿದೆ ಎಂದರು. ಯಾರಿಗಾದರೂ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗೊಂದಲವಿದ್ದರೆ ನೇರವಾಗಿ ಸಮಿತಿಯನ್ನು ಸಂಪರ್ಕಿಸಿ ಮಾಹಿತಿ ಪಡೆಯಬೇಕು. ಮಹಾಲಿಂಗೇಶ್ವರನ ಸನ್ನಿಧಿಯಲ್ಲಿ ನಿಂತು ಪ್ರಾರ್ಥಿಸಿ, ತಪ್ಪು ಮಾಡಿದವರಿಗೆ ದೇವರೇ ಶಿಕ್ಷೆ ನೀಡಲಿ. ಆದರೆ ಆಧಾರರಹಿತ ಮಾಹಿತಿಗಳಿಗೆ ಭಕ್ತರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.
ದೇವಸ್ಥಾನದ ಅಭಿವೃದ್ಧಿಗೆ ಅಡ್ಡಿಯಾಗುವ ಬದಲು ಭಕ್ತರು ಸಹಕಾರ ನೀಡಬೇಕು. ಮಹಾಲಿಂಗೇಶ್ವರ ದೇವರು ಎಲ್ಲರಿಗೂ ಒಳಿತನ್ನು ಮಾಡಲಿ ಎಂದು ಅಶೋಕ್ ಕುಮಾರ್ ರೈ ಆಶಿಸಿದರು.ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ದಿನೇಶ್ ಪಿ.ವಿ., ನಳಿನಿ ಪಿ. ಶೆಟ್ಟಿ, ಈಶ್ವರ ಬೆಡೇಕರ್, ವಿನಯ ಸುವರ್ಣ, ಕೃಷ್ಣವೇಣಿ, ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ಹಾಗೂ ಪುಡಾ ಸದಸ್ಯ ನಿಹಾಲ್ ಪಿ. ಶೆಟ್ಟಿ ಉಪಸ್ಥಿತರಿದ್ದರು.





























