ವಿಟ್ಲ ಭಾಗದ ಹಿರಿಯ ರಾಜಕೀಯ, ಸಾಮಾಜಿಕ ಹಾಗೂ ಧಾರ್ಮಿಕ ಮುಂದಾಳು, ಕೈಂತಿಲ ನಿವಾಸಿ ಕೆ.ಎಸ್. ಸಂಕಪ್ಪ ಗೌಡ (68) ಅವರು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.
ಸಂಕಪ್ಪ ಗೌಡ ಅವರು ವಿಟ್ಲ ಗ್ರಾಮ ಪಂಚಾಯಿತಿಗೆ ಸತತ ನಾಲ್ಕು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ವಿಟ್ಲ ಕ್ಷೇತ್ರದಿಂದ ಬಂಟ್ವಾಳ ಎಪಿಎಂಸಿ ಸಂಸ್ಥೆಗೆ ಚುನಾಯಿತರಾಗಿ ಒಂದು ಅವಧಿಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.
ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ, ಮಾಮೇಶ್ವರ ಇದರ ಅಧ್ಯಕ್ಷರಾಗಿ, ಒಕ್ಕೆತ್ತೂರು ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘಟನೆಗಳ ಪ್ರಮುಖರಾಗಿ ಅವರು ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ.
ಕೆ.ಎಸ್. ಸಂಕಪ್ಪ ಗೌಡ ಅವರ ನಿಧನಕ್ಕೆ ವಿಟ್ಲ ಬಿಜೆಪಿ ಮಹಾಶಕ್ತಿಕೇಂದ್ರ ಸಮಿತಿ ಹಾಗೂ ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಸಂತಾಪ ವ್ಯಕ್ತಪಡಿಸಿದ್ದಾರೆ.



























