ಮಂಗಳೂರು: ಎನ್ಐಎ ಅಧಿಕಾರಿಗಳು ಇಂದು ಏಕಕಾಲದಲ್ಲಿ ಜಮ್ಮು ಕಾಶ್ಮೀರ ಮತ್ತು ಕರ್ನಾಟಕದ ಐದು ಕಡೆ ದಾಳಿ ನಡೆಸಿದ್ದು ಉಳ್ಳಾಲದ ಯುವಕ ಸೇರಿ ನಾಲ್ಕು ಮಂದಿಯನ್ನು ಬಂಧಿಸಿದ್ದಾರೆ.
ಉಳ್ಳಾಲದಲ್ಲಿ ಮಾಜಿ ಶಾಸಕ ಬಿಎಂ ಇದಿನಬ್ಬ ಅವರ ಪುತ್ರನ ಮನೆಗೆ ದಾಳಿ ನಡೆಸಲಾಗಿತ್ತು. ಇದಿನಬ್ಬರ ಹಿರಿಯ ಪುತ್ರ ಬಿಎಂ ಬಾಷಾರಿಗೆ ಸೇರಿದ ಮಾಸ್ತಿಕಟ್ಟೆಯ ಮನೆಗೆ ದಾಳಿ ನಡೆಸಿದ್ದು ಸಂಜೆಯ ವೇಳೆಗೆ ಬಾಷಾ ಅವರ ಕಿರಿಯ ಪುತ್ರ ಅಮರ್ ಅಬ್ದುಲ್ ರಹ್ಮಾನ್ ಎಂಬಾತನನ್ನು ಬಂಧಿಸಿದ್ದಾರೆ. ಇದೇ ವೇಳೆ, ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಒಬೈದ್ ಹಮೀದ್, ಬಂಡಿಪೋರಾ ಜಿಲ್ಲೆಯ ಮುಜಾಮಿಲ್ ಹಸನ್ ಬಟ್, ಬೆಂಗಳೂರಿನಲ್ಲಿ ಶಂಕರ್ ವೆಂಕಟೇಶ ಪೆರುಮಾಳ್ ಅಲಿಯಾಸ್ ಆಲಿ ಮೌವಿಯಾ ಎಂಬವರನ್ನು ಎನ್ಐಎ ತಂಡ ಬಂಧಿಸಿದೆ.
ಜಮ್ಮು ಕಾಶ್ಮೀರ ಮತ್ತು ಕರ್ನಾಟಕದ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ದಾಳಿಗೆ ಒಳಗಾದವರು ಒಬ್ಬರಿಗೊಬ್ಬರು ಸಂಪರ್ಕ ಹೊಂದಿದ್ದಲ್ಲದೆ, ಕಳೆದ ಮಾರ್ಚ್ ತಿಂಗಳಲ್ಲಿ ಕೇರಳದಲ್ಲಿ ಬಂಧಿತನಾಗಿದ್ದ ಶಂಕಿತ ಉಗ್ರ ಮೊಹಮ್ಮದ್ ಅಮೀನ್ ಜೊತೆಗೆ ನಿಕಟ ಸಂಪರ್ಕದಲ್ಲಿದ್ದರು. 2020 ರ ಮಾರ್ಚ್ ತಿಂಗಳಲ್ಲಿ ಹಿಜ್ರಾ ಭೇಟಿಗೆಂದು ಕಾಶ್ಮೀರಕ್ಕೆ ತೆರಳಿದ್ದ ಮೊಹಮ್ಮದ್ ಅಮೀನ್ ಅಲ್ಲಿಗೆ ಉಗ್ರರ ಜೊತೆಗೆ ಸಂಪರ್ಕ ಸಾಧಿಸಿದ್ದ. ಅಲ್ಲದೆ, ಐಸಿಸ್ ಉಗ್ರವಾದಿ ಸಂಘಟನೆಗೆ ಯುವಕರನ್ನು ಸೇರಿಸಲು ಹಣ ಸಂಗ್ರಹಕ್ಕೆ ತೊಡಗಿದ್ದ. ಇದೇ ಕಾರಣಕ್ಕೆ ಕಾಶ್ಮೀರದ ಉಗ್ರರಾದ ಮಹಮ್ಮದ್ ವಕಾರ್ ಲೋನ್ ಮತ್ತು ಆತನ ಸಹಚರರನ್ನು ಭೇಟಿಯಾಗಿದ್ದ.
ಮೊಹಮ್ಮದ್ ಅಮೀನ್ ಭಾರತದ ವಿವಿಧೆಡೆಯಲ್ಲಿ ಯುವಕರನ್ನು ಐಸಿಸ್ ನೆಟ್ವರ್ಕ್ ಸೇರಿಸಲು ಪ್ರಯತ್ನ ಪಟ್ಟಿದ್ದಾನೆ. ಆತನ ಸಹಚರರು ಕೇರಳ, ಕರ್ನಾಟಕ ಮತ್ತು ಇತರ ಕಡೆಗಳಲ್ಲಿ ತೀವ್ರವಾದಿ ಮನಸ್ಸಿನ ಯುವಕರನ್ನು ಐಸಿಸ್ ಉಗ್ರ ಸಂಘಟನೆಗೆ ಸೇರಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಇಂದು ಬಂಧನಕ್ಕೊಳಗಾಗಿರುವ ನಾಲ್ಕು ಮಂದಿ ಹಣ ಸಂಗ್ರಹಿಸಿ, ಕಾಶ್ಮೀರದ ಉಗ್ರ ಮಹಮ್ಮದ್ ವಕಾರ್ ಲೋನ್ ಗೆ ವರ್ಗಾವಣೆ ಮಾಡುತ್ತಿದ್ದರು. ಮೊಹಮ್ಮದ್ ಅಮೀನ್ ಸೂಚನೆಯಂತೆ ಆರೋಪಿಗಳು ಕಾಶ್ಮೀರದ ಉಗ್ರರಿಗೆ ಹಣ ರವಾನೆ ಮಾಡುತ್ತಿದ್ದರು ಎನ್ನುವ ಮಾಹಿತಿಯನ್ನು ಎನ್ಐಎ ಅಧಿಕಾರಿಗಳು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ. ದಾಳಿ ವೇಳೆ ಅವರು ಇದಕ್ಕೆ ಪೂರಕವಾಗಿ ಲ್ಯಾಪ್ಟಾಪ್, ಮೊಬೈಲ್, ಹಾರ್ಡ್ ಡಿಸ್ಕ್, ಪೆನ್ ಡ್ರೈವ್, ಹಲವಾರು ಸಿಮ್ ಕಾರ್ಡ್, ಇನ್ನಿತರ ಇಲೆಕ್ಟ್ರಾನಿಕ್ ವಸ್ತುಗಳು ಪತ್ತೆಯಾಗಿದ್ದು ಅವನ್ನು ವಶಕ್ಕೆ ಪಡೆದಿದ್ದಾರೆ.
ಎನ್ಐಎ ಅಧಿಕಾರಿಗಳು ಕಳೆದ ಮಾರ್ಚ್ 5ರಂದು ಕೇರಳ ಮೂಲದ ಮೊಹಮ್ಮದ್ ಅಮೀನ್ ಅಲಿಯಾಸ್ ಅಬು ಯಾಹ್ಯಾ ಮತ್ತು ಆತನ ಸಹಚರರ ವಿರುದ್ಧ ಹಲವೆಡೆ ಯುವಕರನ್ನು ಐಸಿಸ್ ಸೇರ್ಪಡೆ ಮಾಡುತ್ತಿರುವುದು ಸೇರಿದಂತೆ ಐಸಿಸ್ ಪ್ರೇರಿತ ಚಾನೆಲ್ ಗಳನ್ನು ಟೆಲಿಗ್ರಾಂ, ಹೂಪ್ ಮತ್ತು ಇನ್ ಸ್ಟಾ ಗ್ರಾಮ್ ನಲ್ಲಿ ನಡೆಸುತ್ತಿದ್ದ ಆರೋಪದಲ್ಲಿ ದೇಶದ್ರೋಹ ಸೇರಿ ವಿವಿಧ ಕಾಯ್ದೆಗಳಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ಆನಂತರ ಅದೇ ಪ್ರಕರಣದಲ್ಲಿ ವಿವಿಧ ಕಡೆಗಳಿಗೆ ದಾಳಿ ನಡೆಸಿ, ಮೊಹಮ್ಮದ್ ಅಮೀನ್, ಡಾ.ರಹೀಸ್ ರಶೀದ್ ಮತ್ತು ಮುಶಾಬ್ ಅನ್ವರ್ ಎಂಬವರನ್ನು ಬಂಧಿಸಿದ್ದರು. ಮೊಹಮ್ಮದ್ ಅಮೀನ್ ವಿಚಾರಣೆ ವೇಳೆ ಮಹತ್ವದ ಮಾಹಿತಿಗಳನ್ನು ಹೊರಬಿಟ್ಟಿದ್ದು ತನ್ನ ಮತ್ತು ಐಸಿಸ್ ನೆಟ್ವರ್ಕ್ ಜೊತೆಗಿನ ಸಂಬಂಧವನ್ನು ಬಾಯಿಬಿಟ್ಟಿದ್ದ. ಅದರಂತೆ, ಎನ್ಐಎ ಅಧಿಕಾರಿಗಳು ಇದೀಗ ಮಂಗಳೂರು, ಬೆಂಗಳೂರು ಮತ್ತು ಜಮ್ಮು ಕಾಶ್ಮೀರದ ಮೂರು ಕಡೆ ಏಕಕಾಲದಲ್ಲಿ ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ.