ಮಂಗಳೂರು: ಮಾರಾಣಾಂತಿಕ ಕೊವೀಡ್ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಾಂಡವವಾಡುತ್ತಿದ್ದ ವೇಳೆ “ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ“ಯಡಿ ಚಿಕಿತ್ಸೆ ನೀಡಬೇಕಿದ್ದ ಜಿಲ್ಲೆಯ ಏಳು ಖಾಸಗಿ ಆಸ್ಪತ್ರೆಗಳ ರೋಗಿಗಳು ಹಾಗೂ ಅವರ ಸಂಬಂಧಿಕರಿಂದ ಹೆಚ್ಚುವರಿ ಹಣ ಪಡೆದಿರುವ ಹಾಗೂ ಯೋಜನೆಯಡಿ ಚಿಕಿತ್ಸೆ ನೀಡಲು ನಿರ್ಲಕ್ಷ್ಯ ವಹಿಸಿರುವ ಘಟನೆ ಕಂಡು ಬಂದಿದೆ. ಆಸ್ಪತ್ರೆಗಳ ವರ್ತನೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ಸಂತ್ರಸ್ತರಿಗೆ ಕೂಡಲೇ ಹಣ ಹಿಂದಿರುಗಿಸಲು ಆದೇಶ ಹೊರಡಿಸಿದ್ದಾರೆ . ರೋಗಿಗಳ ಕಡೆಯವರಿಂದ ಅಕ್ರಮವಾಗಿ ವಸೂಲಿ ಮಾಡಿದ ಒಟ್ಟು 3.69 ಲಕ್ಷ ರೂ.ವನ್ನು ಅವರಿಗೆ ವಾಪಸ್ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜರುಗಿದ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಮಟ್ಟದ ಕುಂದುಕೊರತೆ ಪರಿಹಾರ ಸಮಿತಿ ಸಭೆಯಲ್ಲಿ ಅವರು ಈ ಆದೇಶ ಹೊರಡಿಸಿದರು. ಸಭೆಯಲ್ಲಿ ಈ ಯೋಜನೆಯ ಸಂತ್ರಸ್ತರು ದಾಖಲಿಸಿದ್ದ ದೂರುಗಳನ್ನು ಆಲಿಸಿದ ಜಿಲ್ಲಾಧಿಕಾರಿ, ವಾರದೊಳಗೆ ರೋಗಿಗಳ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿ, ಸ್ವೀಕೃತಿ ಪತ್ರವನ್ನು ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸುವಂತೆ ಆದೇಶಿಸಿದರು.
ಕುಂದುಕೊರತೆ ಪರಿಹಾರ ಸಮಿತಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ಕುಮಾರ್ ಅವರು ಈ ಹಿನ್ನಲೆಯಲ್ಲಿ ಏಳು ಆಸ್ಪತ್ರೆಗಳಿಗೆ ನೋಟಿಸ್ ಜಾರಿಗೊಳಿಸಿದ್ದು, ರೋಗಿಗಳಿಂದ ಹೆಚ್ಚುವರಿಯಾಗಿ ಪಡೆದಿರುವ ಒಟ್ಟು ₹3.69 ಲಕ್ಷ ಕೂಡಲೇ ಹಿಂದಿರುಗಿಸುವಂತೆ ಸೂಚಿಸಿದ್ದಾರೆ.
ಯಾವೆಲ್ಲಾ ಪ್ರಕರಣಗಳು ?
ನಗರದ ಒಂದು ಖಾಸಗಿ ಆಸ್ಪತ್ರೆಯಲ್ಲಿ ಆಕ್ಸಿಜನ್ ಮಟ್ಟ ಕಡಿಮೆಯಾಗುತ್ತಿದ್ದ ರೋಗಿಯನ್ನು ಐಸಿಯುಗೆ ದಾಖಲಿಸುವ ಬದಲು ಡಿಲಕ್ಸ್ ರೂಂನಲ್ಲಿ ದಾಖಲಿಸಿ ಚಿಕಿತ್ಸೆ ಒದಗಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊವೀಡ್ ರೋಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದರೆ ಮಾತ್ರ ಆಯುಷ್ಮಾನ್ ಯೋಜನೆಯ ಫಲಾನುಭವಿಯಾಗುತ್ತಾನೆ ಎಂಬ ನಿಯಮದಂತೆ ಚಿಕಿತ್ಸೆ ಪಡೆಯುವುದನ್ನು ತಪ್ಪಿಸಲು ಆಸ್ಪತ್ರೆ ಈ ರೀತಿ ಮಾಡಿತ್ತು ಎಂಬ ಆರೋಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ರೋಗಿಗೆ 50 ಸಾವಿರ ರೂ. ವಾಪಸ್ ನೀಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ರೋಗಿಯ ನೈಜ ಬಿಲ್ 2 ಲಕ್ಷ ರೂ. ಕಳೆದು 78 ಸಾವಿರ ರೂ. ರೋಗಿಗೆ ವಾಪಸ್ ನೀಡುವಂತೆ ಆದೇಶಿಸಲಾಗಿದೆ.
ಮತ್ತೊಂದು ಆಸ್ಪತ್ರೆಯಲ್ಲಿ ‘ನಿಮ್ಮ ವೈದ್ಯರು ಆಯುಷ್ಮಾನ್ ಯೋಜನೆಯಡಿ ನೋಂದಣಿಯಾಗಿಲ್ಲ . ವೈದ್ಯರ ಬದಲಾಯಿಸಿ ತೊಂದರೆಯಾದರೆ ನೀವೇ ಜವಾಬ್ದಾರರು’ ಎಂಬ ಭಯ ಹುಟ್ಟಿಸಿ ರೋಗಿಯನ್ನು ದಾಖಲಿಸಿ ಚಿಕಿತ್ಸೆ ಒದಗಿಸಿದ ಬಗ್ಗೆ ದೂರಲಾಗಿತ್ತು. ಈ ಬಗ್ಗೆ ವಿಚಾರಣೆ ಸಂದರ್ಭ ಆಸ್ಪತ್ರೆ ಮುಖ್ಯಸ್ಥರು ಒದಗಿಸಿದ ಉತ್ತರ ತೃಪ್ತಿದಾಯಕವಾಗಿ ಕಂಡು ಬರದ ಹಿನ್ನೆಲೆಯಲ್ಲಿ 1.50 ಲಕ್ಷ ರೂ. ರೋಗಿಗೆ ವಾಪಸ್ ಮಾಡುವಂತೆ ಆಸ್ಪತ್ರೆ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಬೆಡ್ ಖಾಲಿ ಇದ್ದರೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಪ್ರಕರಣವೊಂದರಲ್ಲಿ ರೋಗಿಯು ಸಮರ್ಪಕ ದಾಖಲೆ ಒದಗಿಸಿದರೆ ಮಾತ್ರ ಯೋಜನೆ ಹಣ ಒದಗಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಸೂಚನಾ ಫಲಕ ಅಳವಡಿಸಲು ಸೂಚನೆ
ಜಿಲ್ಲೆಯ ಎಲ್ಲ ಖಾಸಗಿ ನೋಂದಾಯಿತ ಆಸ್ಪತ್ರೆಗಳಲ್ಲಿ ರೋಗಿಗಳು ಹಣ ಪಾವತಿ ಮಾಡುವಾಗ ಬಿಲ್ ಪಡೆದುಕೊಳ್ಳುವಂತೆ ಆಸ್ಪತ್ರೆಯ ವಿಚಾರಣಾ ಕೌಂಟರ್ ಹಾಗೂ ಬಿಲ್ಲಿಂಗ್ ಕೌಂಟರ್ ಹಾಗೂ ವಾರ್ಡ್ಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವಂತೆ ಆಸ್ಪತ್ರೆಯ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದರು.