ಮಂಗಳೂರು: “ಕೊರೊನಾ ಉತ್ತುಂಗಕ್ಕೆ ಹೋದ ಸಮಯ ಯಾವ ರೀತಿ ಕೆಲಸ ಮಾಡಿದ್ದೀರೋ ಹಾಗೆ ಕೆಲಸ ಮಾಡಿ. ನೀವು ಹಾಗೇ ಕೆಲಸ ಮಾಡಿದ್ದಲ್ಲಿ ಯಾವುದೇ ಲಾಕ್ಡೌನ್ ಆಗಲ್ಲ” ಎಂದು ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಕೊರೊನಾ ನಿಯಂತ್ರಣ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, “ಹೋಂ ಐಸೋಲೇಶನ್ ಸಂಬಂಧ ವೈಜ್ಞಾನಿಕ ಕಾರಣ ನೋಡಿ ಮಾಡಿ. ವೈದ್ಯರ ಮೂಲಕ ಆದಷ್ಟು ಸೋಂಕಿತರ ಮನವೊಲಿಸುವ ಕೆಲಸ ಮಾಡಿ. ಗ್ರಾಮೀಣ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಗ್ರೌಂಡ್ ಲೆವೆಲ್ ಪರಿಶೀಲನೆ ನಡೆಸಿ. ಹೋಂ ಐಸೋಲೇಶನ್ ಇದ್ದವರಿಗೆ ದಿನದಲ್ಲಿ ಎರಡು ಬಾರಿ ತಪಾಸಣೆ ನಡೆಸಿ. ಅವರ ಮನೆ, ಕೊಠಡಿ ಹಾಗೂ ಸುತ್ತಲಿನ ವ್ಯವಸ್ಥೆಯತ್ತ ಗಮನ ಹರಿಸಿ, ಇದರೊಂದಿಗೆ ಕೊರೊನಾ ಕೇರ್ ಸೆಂಟರ್ ಕೂಡಾ ಸುವ್ಯವಸ್ಥಿತವಾಗಿರಲಿ” ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್, ಗ್ಲೌಸ್ ಕೊರತೆ ಬಗ್ಗೆ ಖಾದರ್ ಮಾತನಾಡಿದ್ದು, ಈ ವೇಳೆ ಸಿಎಂ ಬೊಮ್ಮಾಯಿ ದ. ಕ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, “ಮಾಸ್ಕ್, ಗ್ಲೌಸ್ ಇಲ್ಲದೇ ಏನು ಆಡಳಿತ ಮಾಡುತ್ತೀರಾ ಇಲ್ಲಿ?. ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ನೀಡುವುದಕ್ಕೆ ನಿಮ್ಮಿಂದ ಆಗಲ್ವಾ?. ಅಷ್ಟು ಕಾಮನ್ಸೆನ್ಸ್ ಇಲ್ಲದೇ ಏನ್ರೀ ಮಾಡ್ತೀರಾ ನೀವು ಇಲ್ಲಿ?. ಎಸ್ಡಿಆರ್ಎಫ್ ಫಂಡ್ ಅದು, ಇದು ಪಡೆದು ಇವತ್ತೇ ಖರೀದಿ ಮಾಡಿ, ಎಲ್ಲವನ್ನೂ ಇಲ್ಲೇ ಖರೀದಿಸಿ ಸಂಜೆ ನನಗೆ ರಿಪೋರ್ಟ್ ಮಾಡಿ” ಎಂದು ಹೇಳಿದರು.
“ಏನಯ್ಯ, ನೀನು ಏನು ಮಾಡುತ್ತೀದ್ದೀಯಾ ಇಲ್ಲಿ ಅಂತ ಹೇಳು. ನಿನ್ನತ್ರ ಏನು ಸಮಸ್ಯೆ ಇದೆ ಅಂತ ಡಿಸಿ ಗಮನಕ್ಕೆ ತರೋಕೆ ಗೊತ್ತಿಲ್ವಾ?. ಹಿರಿಯ ಆರೋಗ್ಯ ಅಧಿಕಾರಿಯಾಗಿದ್ದರೂ ನೀನು ಏನು ನಿದ್ದೆ ಮಾಡುತ್ತಾ ಇದ್ದೀಯಾ?. ಮಾಸ್ಕ್, ಗ್ಲೌಸ್ ಎಷ್ಟು ಕೊರತೆ ಇದೆ ಅನ್ನೋದು ಲೆಕ್ಕ ಇಡೋಕೆ ಆಗೋದಿಲ್ವಾ ನಿನಗೆ. ನಿಮ್ಮ ಯಾವುದೇ ಸಮರ್ಥನೆ ನನಗೆ ಬೇಡ. ಸಂಜೆಯೊಳಗೆ ನನಗೆ ರಿಪೋರ್ಟ್ ಕೊಡಿ” ಎಂದು ದ.ಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್ ಅವರನ್ನು ಸಿಎಂ ಬೊಮ್ಮಾಯಿ ತರಾಟೆಗೆ ತೆಗೆದುಕೊಂಡರು.



























