ಪುತ್ತೂರು: ಗಾಂಧಿಕಟ್ಟೆ ಸಮಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿಜಿಯವರ 152ನೇ ಜನ್ಮದಿನಾಚರಣೆಯ ಅಂಗವಾಗಿ ಅ.2 ರಂದು ಬಸ್ ನಿಲ್ದಾಣದ ಬಳಿಯ ಗಾಂಧಿ ಕಟ್ಟೆಯಲ್ಲಿ ‘ಗಾಂಧೀ ಜಯಂತಿ’ ಆಚರಣೆ ವಿಶಿಷ್ಟ ರೀತಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಗಾಂಧಿ ಭಜನೆ ಬಳಿಕ ಸರ್ವಧರ್ಮ ಪ್ರಾರ್ಥನೆ ನಡೆಯಲಿದ್ದು, ಶ್ರೀವೈಷ್ಣವಿ ಆಳ್ವ ಭಗವದ್ಗೀತೆ, ಅಪಿಫಾ ಫಾತಿಮ ಕುರಾನ್ ಹಾಗೂ ವಂದನಾ ಗೋವಿಯಸ್ ಬೈಬಲ್ ಪ್ರಾರ್ಥನೆ ನಡೆಸಿಕೊಡಲಿದ್ದಾರೆ. ಬಳಿಕ ನಡೆಯುವ ಸಭಾ ಕಾರ್ಯಕ್ರಮ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಸಹಾಯಕ ಆಯುಕ್ತ ಡಾ|ಯತೀಶ್ ಉಳ್ಳಾಲ್ ಗೌರವಾರ್ಪಣೆ ನಡೆಸಿಕೊಡಲಿದ್ದಾರೆ.
ಗಾಂಧಿಕಟ್ಟೆ ಸಮಿತಿ ಅಧ್ಯಕ್ಷ ರೆ| ವಿಜಯ ಹಾರ್ವಿನ್ ಅಧ್ಯಕ್ಷತೆ ವಹಿಸಲಿದ್ದಾರೆ. ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್ ಬಹುಮಾನ ವಿತರಿಸಲಿದ್ದಾರೆ. ಚೇತನಾ ಆಸ್ಪತ್ರೆಯ ಡಾ. ಜೆ.ಸಿ ಅಡಿಗರವರು ಕೊರೋನಾ ಜಾಗೃತಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ.
ಮಾಜಿ ಸಚಿವರು, ಗಾಂಧಿಕಟ್ಟೆ ನಿರ್ಮಾಣದ ರುವಾರಿಯಾಗಿರುವ ವಿನಯ ಕುಮಾರ್ ಸೊರೆಕೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್, ಮಾಜಿ ಶಾಸಕಿ ಶಕುಂತಳಾ ಟಿ ಶೆಟ್ಟಿ, ಜೇಸಿಐ ಅಧ್ಯಕ್ಷೆ ಸ್ವಾತಿ ಜೆ.ರೈ, ಗಾಂಧಿ ವಿಚಾರ ವೇದಿಕೆ ಅಧ್ಯಕ್ಷ ಝೇವಿಯರ್ ಡಿ’ಸೋಜ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗಾಂಧಿಜಿಯವರು ಪುತ್ತೂರಿಗೆ ಬಂದ ಗಾಂಧಿ ನೆನಪು ಪ್ರಬಂಧಕ್ಕೆ ಪ್ರಥಮ ಚಿನ್ನದ ಮಿಲಿ ನಾಣ್ಯ ಹಾಗೂ ದ್ವಿತೀಯ ಬೆಳ್ಳಿ ನಾಣ್ಯ ಬಹುಮಾನ ನೀಡಲಾಗುವುದು ಎಂದು ಗಾಂಧಿಕಟ್ಟೆ ಸಮಿತಿ ಸಂಚಾಲಕರು, ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ ಹಾಗೂ ಜತೆ ಕಾರ್ಯದರ್ಶಿ ಸೈಯ್ಯದ್ ಕಮಲ್ ತಿಳಿಸಿದ್ದಾರೆ.