ಪುತ್ತೂರು: ನಿವೃತ್ತ ತಹಸಿಲ್ದಾರ್ ಲಿಂಗಪ್ಪ ಗೌಡರವರ ಮನೆಗೆ ನುಗ್ಗಿ, ದರೋಡೆ ನಡೆಸಿ ಬಂಧನಕ್ಕೊಳಗಾಗಿ, ನ್ಯಾಯಾಲಯದಿಂದ ಜಾಮೀನು ಪಡೆದು, ವಿಚಾರಣೆಗೆ ಹಾಜರಾಗದೆ, ತಲೆಮರೆಸಿ ಕೊಂಡು, ಪೊಲೀಸರಿಂದ ಬಂಧನಕ್ಕೊಳಗಾಗಿ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗೆ, ಪುತ್ತೂರಿನ ನ್ಯಾಯಾಲಯವು,ಷರತ್ತುಬದ್ಧ ಜಾಮೀನು ನೀಡಿ ಬಿಡುಗಡೆಗೊಳಿಸಿದೆ.
1995 ನೇ ಇಸವಿಯಲ್ಲಿ, ಕೇರಳ ರಾಜ್ಯದ ಎರ್ನಾಕುಲಂ ನಿವಾಸಿ, ಜೋಡ್ ಸನ್ ಎಂಬ ಆರೋಪಿ, ಪುತ್ತೂರು ನಗರ ಠಾಣಾ ವ್ಯಾಪ್ತಿಯ ಸಾಲ್ಮರ ಎಂಬಲ್ಲಿ ವಾಸ್ತವ್ಯವಿದ್ದ, ನಿವೃತ್ತ ತಹಸಿಲ್ದಾರ್ ಲಿಂಗಪ್ಪ ಗೌಡರವರ ಮನೆಗೆ, ನೀರು ಕೇಳುವ ನೆಪದಲ್ಲಿ ಬಂದು, ಮನೆಗೆ ನುಗ್ಗಿ,ಚೂರಿ ತೋರಿಸಿ, ಬೆದರಿಸಿ, ಲಿಂಗಪ್ಪ ಗೌಡ ರವರ ಪತ್ನಿ ಯ ಕೈಯಲ್ಲಿದ್ದ, ಚಿನ್ನದ ಬಳೆಗಳನ್ನು ಕಸಿದುಕೊಂಡು ಹೋದ ಬಗ್ಗೆ,ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿ, ಚಿನ್ನದ ಬಳೆಗಳನ್ನು ವಶಪಡಿಸಿ ಕೊಂಡಿದ್ದರು. ಹಲವು ತಿಂಗಳುಗಳ ನಂತರ, ಆರೋಪಿಗೆ ಉಚ್ಚ ನ್ಯಾಯಾಲದಿಂದ ಜಾಮೀನು ಮಂಜೂರು ಗೊಂಡಿತ್ತು. ಜಾಮೀನು ಪಡೆದು ಬಿಡುಗಡೆಗೊಂಡ ನಂತರ, ಆರೋಪಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ರಿಂದ, ಆರೋಪಿಯ ವಿರುದ್ಧ ಬಂಧನದ ಆಜ್ಞೆಯನ್ನು ನ್ಯಾಯಾಲಯ ಹೊರಡಿಸಿತ್ತು.
ನಂತರ ಪೊಲೀಸರು ಆರೋಪಿಯನ್ನು ಹುಡುಕಾಟ ನಡೆಸಿದ್ದು, ದಸ್ತಗಿರಿಗೆ ಆರೋಪಿ ಸಿಗದೇ ಇದ್ದುದರಿಂದ, ಹಳೆ ಪ್ರಕರಣವಾಗಿ ಮಾರ್ಪಾಡುಗೊಂಡಿತ್ತು. ಕಳೆದ ಸ.27 ರಂದು, ಆರೋಪಿಯನ್ನು ಪುತ್ತೂರು ನಗರ ಪೊಲೀಸರು, ಕೇರಳದ ಎರ್ನಾಕುಲಂನಿಂದ ಬಂದಿಸಿ, ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು.
ನ್ಯಾಯಾಂಗ ಬಂಧನದಲ್ಲಿದ್ದ, ಆರೋಪಿಯ ಬಿಡುಗಡೆಗಾಗಿ, ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ವಾದ-ವಿವಾದವನ್ನು ಆಲಿಸಿದ ಮಾನ್ಯ ನ್ಯಾಯಾಲಯವು, ಆರೋಪಿಗೆ ಷರತ್ತುಬದ್ಧ ಜಾಮೀನನ್ನು ನೀಡಿ ಬಿಡುಗಡೆಗೊಳಿಸಿದೆ. ಆರೋಪಿಯ ಪರವಾಗಿ ಪುತ್ತೂರಿನ ನ್ಯಾಯವಾದಿ ನೂರುದ್ದೀನ್ ಸಾಲ್ಮರ ವಾದಿಸಿದರು.



























