ಕಾರ್ಕಳ: ರಾಷ್ಟ್ರೀಯ ತನಿಖಾ ಸಂಸ್ಥೆಯ ಪ್ರಕರಣಗಳ ವಿಚಾರಣೆಯ ಕುರಿತು ವಿಶೇಷ ನ್ಯಾಯಾಲಯವು ಇಬ್ಬರು ನಕ್ಸಲ್ವಾದಿಗಳ ವಿರುದ್ಧ ಬಂಧನಕ್ಕೆ ವಾರೆಂಟ್ ಜಾರಿಗೊಳಿಸಿ ಆದೇಶಿಸಿದೆ.
ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕುತ್ಲೂರು ಗ್ರಾಮದ ಕೊಟ್ಯಂತಡ್ಕ ಮನೆಯ ಸುಂದರಿ ಆಲಿಯಾಸ್ ಗೀತಾ ಆಲಿಯಾಸ್ ಸಿಂಧು ಮತ್ತು ರಾಯಚೂರು ಜಿಲ್ಲೆಯ ಅರೋಲಿ ಗ್ರಾಮ ಕುಡುಡಿ ಮುಖ್ಯ ರಸ್ತೆಯ ಹನುವ್ವನ ದೂತರ ಮಠದ ಎದುರಿನ ಅಂಬೇಡ್ಕರ್ ಕಾಲನಿಯ ಮಹೇಶ್ ಆಲಿಯಾಸ್ ಜಯಣ್ಣ ಆಲಿಯಾಸ್ ಜಾನ್ ಆಲಿಯಾಸ್ ಮಾರಪ್ಪ ಎನ್ನಲಾಗಿದೆ. ಪಶ್ಚಿಮಘಟ್ಟದಲ್ಲಿ ತಲೆಎತ್ತಿರುವ ನಕ್ಸಲ್ ಚಳುವಳಿಯಲ್ಲಿ ಇವರು ಸಕ್ರಿಯಾರಾಗಿದ್ದರು ಎಂದು ತಿಳಿದು ಬಂದಿದೆ.
ಕರ್ನಾಟಕ ಪೊಲೀಸರು ಈ ಹಿಂದೆ ಇವರ ಪತ್ತೆಯ ಮಾಹಿತಿದಾರರಿಗೆ ಬಹುಮಾನ ಘೋಷಿಸಿತ್ತು. ಇದೀಗ ರಾಷ್ಟ್ರೀಯ ತನಿಖಾ ಸಂಸ್ಥೆಯು ಆರೋಪಿತರ ಪತ್ತೆಗಾಗಿ ಸಾರ್ವಜನಿಕ ತಿಳುವಳಿಕೆಯ ಕರಪತ್ರವನ್ನು ಹೊರತಂದಿದೆ. ಅಲ್ಲದೆ ಇಬ್ಬರ ಸುಳಿವು ನೀಡಿದವರಿಗೆ ತಲಾ 10 ಲಕ್ಷ ರೂ. ಬಹುಮಾನ ಘೋಷಣೆ ಮಾಡಿದೆ.
ನ್ಯಾಶನಲ್ ಇನ್ವೇಷ್ಟೀಗೆಶನ್ ಏಜೆನ್ಸಿ ಹೌಸ್ ನಂಬ್ರ 28/ 443 ಗಿರಿನಗರ ಕಡವಂತರ ಕೊಚ್ಚಿ ಕೇರಳ- 682020, ಮೊಬೈಲ್ 9477715294 ಸಂಖ್ಯೆಗೆ ಸಂಪರ್ಕಿಸಬೇಕೆಂದು ಕೋರಲಾಗಿದೆ. ಸುಳಿವು ನೀಡಿದವರ ಮಾಹಿತಿ ಗೌಪ್ಯವಾಗಿರಿಸಲಾಗುವುದೆಂದು ತಿಳಿಸಿದೆ.


























