ಮಂಗಳೂರು: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು, ಅರಾಜಕತೆ ಉಂಟಾಗಿರುವುದರಿಂದ ಅಲ್ಲಿನ ಜನ ಅಕ್ರಮವಾಗಿ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ನುಸುಳುವ ಸಾಧ್ಯತೆ ಇದೆ.
ಈ ಸಂಬಂಧ ಕರಾವಳಿ ತಟ ರಕ್ಷಣಾ ಪಡೆಯನ್ನು ಸನ್ನದ್ದ ಗೊಳಿಸಲಾಗಿದ್ದು, ಸಮುದ್ರದಲ್ಲಿ ಸಂಚರಿಸುವ ಹಡಗು, ನೌಕೆಗಳ ಮೇಲೆ ಮತ್ತು ಹೊರ ದೇಶಗಳ ಮೀನುಗಾರರ ಮೇಲೆ ತೀವ್ರ ನಿಗಾ ಇರಿಸಲಾಗಿದೆ. ಜೊತೆಗೆ ರಾಜ್ಯದ ಕರಾವಳಿ ಕಾವಲು ಪೊಲೀಸ್ ದಳವೂ ಕಟ್ಟೆಚ್ಚರ ವಹಿಸುತ್ತಿದ್ದು, ಮೀನುಗಾರರು ಸೇರಿ ತೀರದ ನಿವಾಸಿಗಳಿಗೆ ನೋಟಿಸ್ ಜಾರಿ ಮಾಡಿದೆ.
ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿರುವುದರಿಂದ ವಿದ್ಯುತ್, ಔಷಧ, ಆಹಾರ ಪದಾರ್ಥಗಳಿಗಾಗಿ ಪರದಾಟ ನಡೆಯುತ್ತಿದೆ. ಅಲ್ಲಿನ ಜನರು ಕೊಲೆ, ದರೋಡೆ, ಕಲಹದಿಂದ ತತ್ತರಿಸಿದ್ದು, ಸಮುದ್ರ ಸೇರಿದಂತೆ ಇನ್ನಿತರೆ ಮಾರ್ಗಗಳ ಮೂಲಕ ಭಾರತಕ್ಕೆ ಅಕ್ರಮವಾಗಿ ನುಸುಳುವ ಸಾಧ್ಯತೆ ಇದೆ.ಈ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸುವಂತೆ ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆ ತಿಳಿಸಿದೆ.
ನೋಟಿಸ್ ನೀಡಿದ ಕರಾವಳಿ ಕಾವಲು ಪೊಲೀಸ್ ಠಾಣೆ ಅಪರಿಚಿತ ವ್ಯಕ್ತಿಗಳಿಗೆ ಮನೆ ಬಾಡಿಗೆ ನೀಡುವ ಸಮಯದಲ್ಲಿ ಅವರುಗಳ ಪೂರ್ವಾಪರ ಮಾಹಿತಿ ತಿಳಿದು, ಸೂಕ್ತ ದಾಖಲೆಯನ್ನು ಪಡೆದು ಕೂಡಲೇ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಕರಾವಳಿ ಪೊಲೀಸ್ ಠಾಣೆಯು ಮಂಗಳೂರಿನ ಮೀನುಗಾರರು, ರಿಕ್ಷಾ ಚಾಲಕರು ಸೇರಿದಂತೆ ವಿವಿಧೆಡೆ ಎಚ್ಚರಿಕೆಯ ನೋಟಿಸ್ ನೀಡಿದೆ.