ಬೆಂಗಳೂರು: ಈ ಹಿಂದೆ ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಮುಜರಾಯಿ ಇಲಾಖೆ ಆಯುಕ್ತೆ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಕರ್ನಾಟಕ ಸರ್ಕಾರವು ಆದೇಶ ಹೊರಡಿಸಿದೆ.
ರೋಹಿಣಿ ಸಿಂಧೂರಿ ಅವರು ಮೈಸೂರು ಜಿಲ್ಲಾಧಿಕಾರಿಯಾಗಿದ್ದಾಗ ಅವರ ವಿರುದ್ಧ ನಾಲ್ಕು ಆರೋಪಗಳು ಕೇಳಬಂದಿದ್ದವು. ಈ ಪ್ರಕರಣಗಳ ಸತ್ಯಾಸತ್ಯತೆ ತಿಳಿಯಲು ರಾಜ್ಯ ಸರ್ಕಾರವು ತನಿಖೆಗೆ ಆದೇಶಿಸಿದೆ.
ತನಿಖಾಧಿಕಾರಿಯಾಗಿ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್.ಜಯರಾಮ್ ಅವರನ್ನು ನೇಮಿಸಲಾಗಿದ್ದು, 30 ದಿನಗಳ ಒಳಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ.
ಮಾರುಕಟ್ಟೆ ದರಕ್ಕಿಂತಲೂ ಹೆಚ್ಚಿನ ಹಣ ತೆತ್ತು ಪರಿಸರಸ್ನೇಹಿ ಬಟ್ಟೆ ಬ್ಯಾಗ್ ಖರೀದಿಸಿದ್ದು, ಜಿಲ್ಲಾಧಿಕಾರಿ ನಿವಾಸದಲ್ಲಿ 50 ಲಕ್ಷ ಖರ್ಚು ಮಾಡಿ ಅನಧಿಕೃತವಾಗಿ ಈಜುಕೊಳ ಮತ್ತು ಜಿಮ್ ನಿರ್ಮಿಸಿದ್ದು, ಕೊವಿಡ್ನಿಂದ ಮೃತಪಟ್ಟವರ ಸಂಖ್ಯೆ ಮುಚ್ಚಿಟ್ಟಿದ್ದು ಮತ್ತು ಚಾಮರಾಜನಗರದಲ್ಲಿ ಆಮ್ಲಜನಕ ಪೂರೈಕೆ ವ್ಯತ್ಯಯದಿಂದ ಸಂಭವಿಸಿದ ಸಾವುಗಳಿಗೆ ಕಾರಣವಾದ ಆರೋಪಗಳು ರೋಹಿಣಿ ಸಿಂಧೂರಿ ವಿರುದ್ಧ ಕೇಳಿಬಂದಿವೆ.
ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಈ ಹಿಂದೆ ಹಲವು ಬಾರಿ ರೋಹಿಣಿ ಸಿಂಧೂರಿ ವಿರುದ್ಧ ಆರೋಪ ಮಾಡಿದ್ದರು. ಹಲವು ಬಾರಿ ಸುದ್ದಿಗೋಷ್ಠಿ ನಡೆಸಿ ಗಮನ ಸೆಳೆಯಲು ಯತ್ನಿಸಿದ್ದರು. ಮೈಸೂರು ಮಹಾನಗರ ಪಾಲಿಕೆಯ ಮಾಜಿ ಡೆಪ್ಯುಟಿ ಮೇಯರ್ ಶೈಲೇಂದ್ರ ಭೀಮರಾವ್ ಸಹ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇವರಿಬ್ಬರ ಪತ್ರದ ಹಿನ್ನೆಲೆಯಲ್ಲಿ ಸರ್ಕಾರವು ಪ್ರಾಥಮಿಕ ತನಿಖೆಗೆ ಆದೇಶ ನೀಡಿದೆ. ರೋಹಿಣಿ ಸಿಂಧೂರಿ ಅವರು ಪ್ರಸ್ತುತ ಧಾರ್ಮಿಕ ಮತ್ತು ದತ್ತಿ ಇಲಾಖೆ ಆಯುಕ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.