ಅಂತಾರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಾಟ ವಿರೋಧಿ ದಿನವಾದ ಜೂ.26 ರಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವಶಪಡಿಸಿಕೊಳ್ಳಲಾದ ಮಾದಕ ವಸ್ತುಗಳ ಪೈಕಿ ಪ್ರಸ್ತುತ ಠಾಣೆಯಲ್ಲಿ ವಿಲೇವಾರಿ ಸಲುವಾಗಿ ಬಾಕಿ ಇರುವ ಮಾದಕ ವಸ್ತುಗಳನ್ನು ವಿಲೇವಾರಿಗೊಳಿಸುವ ಬಗ್ಗೆ ನ್ಯಾಯಾಲಯಗಳಿಂದ ಆದೇಶವನ್ನು ಪಡೆದು ನಾಶಪಡಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಠಾಣೆಯ 11 ಪ್ರಕರಣಗಳಲ್ಲಿ ಸುಮಾರು 23,75,300 ರೂ. ಮೌಲ್ಯದ 53 ಕೆ. ಜಿ. 128 ಗ್ರಾಂ ಮಾದಕ ವಸ್ತು ಗಾಂಜಾವನ್ನು ಮತ್ತು ಸುಮಾರು 30,00,000 ರೂ. ಮೌಲ್ಯದ 120 ಗ್ರಾಂ ಹೆರಾಯಿನ್ ಅನ್ನು ಬಯೋಮೆಡಿಕಲ್ ತ್ಯಾಜ್ಯ ನಿರ್ವಹಣೆ, ಸಂಸ್ಕರಣೆ ಮತ್ತು ವಿಲೇವಾರಿ ಘಟಕವಾದ ಮೆ. ರಾಮ್ಕಿ ಎನರ್ಜಿ ಮತ್ತು ಎನ್ವಿರೋನ್ ಮೆಂಟ್ ಲಿ. ರವರಿಗೆ ಹಸ್ತಾಂತರಿಸಿ ನಾಶಪಡಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದ ಮಾದಕ ದ್ರವ್ಯ ವಿಲೇವಾರಿ ಸಮಿತಿ ಅಧ್ಯಕ್ಷರಾದ ಸೋನಾವಣೆ ಋಷಿಕೇಶ್ ಭಗವಾನ್, ಐಪಿಎಸ್ ಮತ್ತು ಸದಸ್ಯರುಗಳಾದ ಶಿವಾಂಶು ರಜಪೂತ್, ಐಪಿಎಸ್ ಸಹಾಯಕ ಪೊಲೀಸ್ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ ಮತ್ತು ಪುತ್ತೂರು ಉಪವಿಭಾಗ ಪೊಲೀಸ್ ಉಪಾಧೀಕ್ಷರಾದ ಡಾ. ಗಾನ ಪಿ. ಕುಮಾರ್ ರವರು ಉಪಸ್ಥಿತರಿದ್ದರು.