ಪುತ್ತೂರು: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜು.28 ರಂದು ಎರಡು ಅಂಗಡಿ ಸಾಮಾಗ್ರಿಗಳನ್ನು ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಗ್ರಾಮ ಪಂಚಾಯತ್ ಕಟ್ಟಡದಲ್ಲಿ ತೆಂಗಿನಕಾಯಿ ವ್ಯಾಪಾರ ಮಾಡಕೊಂಡಿದ್ದ ಮೂಸ ಅಹಮ್ಮದ್ ಕುಂಞ ಎಂಬವರ ಅಂಗಡಿ ಬಳಿಗೆ ಜು.28 ರಂದು ಬಂದಿದ್ದ 10-20 ಜನರು ಅಂಗಡಿ ಹೊರಗೆ ನಿಲ್ಲಿಸಿದ್ದ ಸ್ಕೂಟಿಯನ್ನು ಸುಟ್ಟು ಹಾಕಿ ಅಂಗಡಿಯೊಳಗಿದ್ದ ಸಾಮಾಗ್ರಿಗಳನ್ನು ಕೂಡ ಹೊರಗೆ ಬಿಸಾಡಿದ್ದು, ಸುಮಾರು 50,000/- ದಷ್ಟು ನಷ್ಟವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ 143, 146, 147, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
ಇದೇ ಪೊಲಿಸ್ ಠಾಣಾ ವ್ಯಾಪ್ತಿಯ ಕಡಬ ತಾಲೂಕು ಎನೆಕಲ್ಲಿನ ಪುಂಡಿ ಗದ್ದೆ ಎಂಬಲ್ಲಿ ಖಾದರ್ ಎಂಬವರು ನಡೆಸುತ್ತಿದ್ದ ಅಡಿಕೆ ವ್ಯಾಪಾರದ ಅಂಗಡಿಗೆ ಜು.28 ರಂದು ಆಗಮಿಸಿದ 10-20 ಜನರು ಅಂಗಡಿಯಲ್ಲಿದ್ದ ಫ್ರಿಡ್ಜ್, ಕ್ಯಾಶ್ ಕೌಂಟರ್, ದಿನಸಿ ಸೇರಿ ಹಲವು ಸಾಮಾನು ಪುಡಿಗೈದಿದ್ದು, ಜೊತೆಗೆ ಅಂಗಡಿಯೊಳಗಿದ್ದ ಅಡಿಕೆಯನ್ನು ಚೆಲ್ಲಾಪಿಲ್ಲಿಯಾಗಿ ಬಿಸಾಡಿ ಮಳೆಯ ನೀರಿಗೆ
ಹಾಕಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ 77-2022 ಕಲಂ 143, 146, 147, 447, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.