ಪುತ್ತೂರು: ಕಾಣಿಯೂರಿನಲ್ಲಿ ನಡೆದ ಸಭೆಯಲ್ಲಿ ದ್ವೇಷ ಭಾಷಣ ಮಾಡಿ, ಕೋಮು ಸಂಘರ್ಷ ನಡೆಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ನಿಯೋಗ ಪುತ್ತೂರು ಪೊಲೀಸ್ ಉಪ ಅಧೀಕ್ಷಕರಿಗೆ ದೂರು ನೀಡಿದ್ದು, ಸುಪ್ರೀಂ ಕೋರ್ಟ್ ಆದೇಶದಂತೆ ಸುಮೋಟೋ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದೆ.
ನ.13 ರಂದು ಕಾಣಿಯೂರಿನಲ್ಲಿ ವಿಶ್ವ ಹಿಂದೂ ಪರಿಷದ್, ಭಜರಂಗದಳ, ಮಾತೃವಾಹಿನಿ ಹಾಗೂ ಹಿಂದೂ ಜಾಗರಣ ವೇದಿಕೆ ಎಂಬ ಹೆಸರಿನ ಸಂಘಟನೆಗಳು ಏರ್ಪಡಿಸಿದ್ದ ಹಿಂದೂ ಬೃಹತ್ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅರುಣ್ ಕುಮಾರ್ ಪುತ್ತಿಲ, ಮುರಳಿಕೃಷ್ಣ ಹಸಂತ್ತಡ್ಕ, ಚಿನ್ಮಯ್ ರೈ ಈಶ್ವರಮಂಗಲ ಹಾಗೂ ರಘು ಸಕಲೇಶಪುರ ಎಂಬವರು ಅನ್ಯಧರ್ಮಗಳನ್ನು ಹೀಯಾಳಿಸಿ, ಅವರನ್ನು ದ್ವೇಷಿಸುವಂತೆ ಸ್ವಧರ್ಮೀಯರನ್ನು ಪ್ರೇರೇಪಿಸುವ ಮತ್ತು ಕಾನೂನನ್ನು ಕೈಗೆತ್ತಿಕೊಂಡು ಹಿಂಸಾಚಾರ ಎಸಗುವಂತೆ ಜನರನ್ನು ಉದ್ರೇಕಿಸುವ ದ್ವೇಷ ಭಾಷಣವನ್ನು ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇತ್ತೀಚಿಗೆ ದೇಶದ ಸರ್ವೋಚ್ಚ ನ್ಯಾಯಾಲಯವು ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಸುಮೋಟೋ ಪ್ರಕರಣ ದಾಖಲಿಸುವಂತೆ ಆದೇಶಿಸಿರುತ್ತದೆ. ಈ ಹಿನ್ನೆಲೆ ಸುಪ್ರೀಂ ಕೋರ್ಟ್ ಆದೇಶದಂತೆ ದ್ವೇಷ ಭಾಷಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿ ಕೋಮು ಸಾಮಾರಸ್ಯವನ್ನು ಕಾಪಾಡುವಂತೆ ದೂರಿನಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಶಿವರಾಮ್ ಆಳ್ವ ಎನ್., ಚಂದ್ರಹಾಸ ಶೆಟ್ಟಿ, ಮುರಳೀಧರ ರೈ ಮಠಂತಬೆಟ್ಟು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ. ವಿಶ್ವನಾಥ್ ರೈ, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ. ಬಿ., ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ, ವಿಶಾಲಾಕ್ಷಿ ಬನ್ನೂರು, ಮುಕೇಶ್ ಕೆಮ್ಮಿಂಜೆ, ಅಮಲ ರಾಮಚಂದ್ರ, ನಗರಸಭಾ ಸದಸ್ಯ ಮಹಮ್ಮದ್ ರಿಯಾಝ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.