ಮಂಗಳೂರು : ಸಾಮಾಜಿಕ ಜಾಲತಾಣ ಫೇಸ್ಬುಕ್ ಖಾತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ವ್ಯಕ್ತಿಯ ಪತ್ನಿ ತನ್ನ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯತ್ವವನ್ನು ಕಳೆದುಕೊಂಡು ಘಟನೆ ನಡೆದಿದೆ.
ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯೆ ನಫೀಸ ಮಿಸ್ರಿಯಾ ಅವರ ಪತಿ ಲುಕ್ಮಾನ್ ಅಡ್ಯಾರ್ ಅವರು ಕೊರೊನಾದಿಂದ ಸತ್ತವರ ಶವದ ಪೋಟೊದ ಜೊತೆ ದೇಶದಲ್ಲಿ ಜನರು ಈ ರೀತಿ ಸಾಯಲು ಕಾರಣರಾದ ದೇಶದ ಪ್ರಧಾನಿಯೂ ಬೀದಿ ಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲ ಪ್ರಾರ್ಥಿಸಬೇಕು ಎಂದು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಹಿನ್ನಲೆ ಲುಕ್ಮಾನ್ ಅಡ್ಯಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್ ಅಸೈಗೋಳಿ ಕೊಣಾಜೆ ಠಾಣೆಗೆ ದೂರು ನೀಡಿದ್ದರು. ಈ ಘಟನೆ ನಡೆದ ಬೆನ್ನಲ್ಲೆ ಲುಕ್ಮಾನ್ ಅಡ್ಯಾರ್ ಅವರ ಪತ್ನಿ ನಫೀಸ ಮಿಸ್ರಿಯಾ ಅವರ ಸದಸ್ಯತ್ವವನ್ನು ರದ್ದು ಮಾಡಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಆದೇಶಿಸಿದ್ದಾರೆ.
ದೇಶದ ಪ್ರಧಾನಿಯವರ ಬಗ್ಗೆ ಅತ್ಯಂತ ಕಠೋರವಾದ ಹಾಗೂ ಕಾನೂನಿಗೆ ವಿರುದ್ಧವಾದ ಪೋಸ್ಟ್ಗಳನ್ನು ನಿಮ್ಮ ಪತಿ ಹಾಕಿದ್ದಾರೆ. ದೇಶದ ಪ್ರಧಾನಿಯ ಸಾವನ್ನು ಬಯಸುವವರ ಹೆಂಡತಿಯು ನಮ್ಮ ಅಕಾಡೆಮಿ ಸದಸ್ಯರಾಗಿ ಸಮಿತಿಯಲ್ಲಿ ಮುಂದುವರಿಯುವುದು ಸರಿಯಲ್ಲ ಹಾಗೂ ತಮ್ಮನ್ನು ತಕ್ಷಣವೇ ಅಕಾಡೆಮಿ ಸದಸ್ಯತ್ವದಿಂದ ವಜಾಗೊಳಿಸಲಾಗಿದೆ’ ಎಂದು ಅಧ್ಯಕ್ಷರ ಅನುಮತಿ ಮೇರೆಗೆ ರಿಜಿಸ್ಟ್ರಾರ್ ಆದೇಶ ಹೊರಡಿಸಿದ್ದಾರೆ. ಈ ಪತ್ರವೂ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.



























