ಹೈದರಾಬಾದ್ : ಪ್ರಸ್ತುತ ಭಾರತದಲ್ಲಿ ನಡೆಯುತ್ತಿರುವ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಕ್ರಿಕೆಟ್ ಮೈದಾನದಲ್ಲಿ ನಮಾಝ್ ಮಾಡಿದ ಪಾಕಿಸ್ತಾನದ ಕ್ರಿಕೆಟಿಗ ಮೊಹಮ್ಮದ್ ರಿಝ್ವಾನ್ ವಿರುದ್ಧ ಅಂತರ್ರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಗೆ ದೂರು ನೀಡಲಾಗಿದೆ.
ಭಾರತದ ಸುಪ್ರೀಂ ಕೋರ್ಟ್ನಲ್ಲಿ ವಕೀಲರಾಗಿರುವ ವಿನೀತ್ ಜಿಂದಾಲ್ ಎಂಬ ದೂರುದಾರ ಐಸಿಸಿಗೆ ಪತ್ರ ಬರೆದಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೇಳಿಕೊಳ್ಳಲಾಗಿದೆ.
ಅಕ್ಟೋಬರ್ 6 ರಂದು ಹೈದರಾಬಾದ್ನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧ ವಿಶ್ವಕಪ್ನ ಪಂದ್ಯದ ವೇಳೆ ಪಾಕಿಸ್ತಾನ್ ಆಟಗಾರ ಮೊಹಮ್ಮದ್ ರಿಝ್ವಾನ್ ಮೈದಾನದಲ್ಲೇ ನಮಾಝ್ ಮಾಡಿದ್ದರು. ಈ ಸಂಬಂಧ ಇದೀಗ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರಿಗೆ ವಿನೀತ್ ಜಿಂದಾಲ್ ದೂರು ಸಲ್ಲಿಸಿದ್ದಾರೆ.
“ಕ್ರಿಕೆಟ್ ಮೈದಾನದಲ್ಲಿ ಮೊಹಮ್ಮದ್ ರಿಝ್ವಾನ್ ನಮಾಝ್ ಮಾಡಿರುವುದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾಗಿದೆ. ಇದು ಉದ್ದೇಶಪೂರ್ವಕ ಧರ್ಮದ ಚಿತ್ರಣದ ಸಂಕೇತವಾಗಿದೆ” ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಾಕ್ ಆಟಗಾರನ ಈ ನಡೆಯು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಮೊಹಮ್ಮದ್ ರಿಝ್ವಾನ್ ತನ್ನ ಧರ್ಮವನ್ನು ಪ್ರದರ್ಶಿಸುವ ಮೂಲಕ, ಉದ್ದೇಶಪೂರ್ವಕವಾಗಿ ಮುಸ್ಲಿಂ ಎಂಬ ಸಂದೇಶವನ್ನು ನೀಡುತ್ತಿದ್ದಾರೆ. ಇದು ಕ್ರೀಡೆಯ ಉತ್ಸಾಹವನ್ನು ಸೋಲಿಸುವಂತಹ ವಿಚಾರ.
ವಿರಾಮದ ಸಮಯದಲ್ಲಿ ತನ್ನ ತಂಡದ ಸಹ ಆಟಗಾರರು ಪಾನೀಯಕ್ಕಾಗಿ ಕಾಯುತ್ತಿರುವಾಗ ರಿಝ್ವಾನ್ ಮೈದಾನದ ನಡುವೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇಂತಹ ನಡೆಗಳಿಗೆ ಅವಕಾಶ ನೀಡಬಾರದು ಎಂದು ದೂರಿನಲ್ಲಿ ಹೇಳಲಾಗಿದೆ.
ಇದಲ್ಲದೆ ಮೊಹಮ್ಮದ್ ರಿಝ್ವಾನ್ ಶ್ರೀಲಂಕಾ ವಿರುದ್ಧ ಬಾರಿಸಿದ ಶತಕವನ್ನು ಗಾಜಾದ ಜನರಿಗೆ ಅರ್ಪಿಸಿದ್ದರು. ಇದು ಕೂಡ ವಿವಾದಕ್ಕೆ ಕಾರಣವಾಗಿತ್ತು. ಈ ವಿಚಾರವನ್ನು ಕೂಡ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ತಮ್ಮ ದೂರಿನಲ್ಲಿ ಪ್ರಸ್ತಾಪಿಸಿದ್ದಾರೆ.

























