ಮಂಗಳೂರು : ಬಿಸಿಲ ಬೇಗೆ, ವಿಪರೀತ ಸೆಕೆಯಿಂದ ತತ್ತರಿಸಿದ್ದ ಕರಾವಳಿಯ ಜನತೆಗೆ ಇಂದು ಮುಂಜಾನೆ ಸುರಿದ ಮಳೆ ತಂಪೆರೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಸಿಡಿಲು ಸಹಿತ ಉತ್ತಮ ಮಳೆ ಸುರಿದಿದೆ.
ಮಂಗಳೂರಿನ ಹೊರ ವಲಯ, ಸುರತ್ಕಲ್, ಹಳೆಯಂಗಡಿ ಪರಿಸರದಲ್ಲಿ ಶುಕ್ರವಾರ ಮುಂಜಾನೆ ಮತ್ತು ರಾತ್ರಿ ವೇಳೆ ಸಾಧಾರಣ ಮಳೆ ಸುರಿದಿತ್ತು.
ಶುಕ್ರವಾರ ಸಂಜೆ ವೇಳೆಗೆ ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕಿನ ವಿವಿಧೆಡೆ ಉತ್ತಮ ಮಳೆಯಾಗಿದೆ. ಬಂಟ್ವಾಳ, ಪುತ್ತೂರು ತಾಲೂಕಿನ ಕೆಲವು ಕಡೆ ಸಾಧಾರಣ ಮಳೆಯಾಗಿದೆ.
ಕೆಲವೆಡೆ ಸ್ವಲ್ಪ ಸಮಯ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಶುಕ್ರವಾರ ಚಾರ್ಮಾಡಿ, ನೆರಿಯ ಮುಂಡಾಜೆ, ಉಜಿರೆ, ಗುರಿಪಳ್ಳ, ಗೇರುಕಟ್ಟೆ, ತೋಟತ್ತಾಡಿ, ಚಿಬಿದ್ರೆ, ಕಡಿರುದ್ಯಾವರ, ದಿಡುಪೆ ಪರಿಸರದಲ್ಲಿ ಉತ್ತಮ ಮಳೆ ಸುರಿದಿದೆ.
ಚಾರ್ಮಾಡಿ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾದರೆ ನೆರಿಯ ಕಡೆ ಗಾಳಿ, ಗುಡುಗಿನ ಸಹಿತ ಮಳೆ ಬಿದ್ದಿದೆ. ಉಜಿರೆ ಧರ್ಮಸ್ಥಳ ಸುತ್ತಮುತ್ತ ಹನಿ ಮಳೆಯಾಗಿದೆ.
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯಂತೆ ಮುಂದಿನ ಮೂರು ದಿನ ದಕ್ಷಿಣ ಕನ್ನಡ ಮತ್ತು ಉಡುಪಿ ಸಹಿತ ಕರಾವಳಿ ಭಾಗದ ಕೆಲವು ಕಡೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಎ.20 ಮತ್ತು 21ರಂದು ಉತ್ತಮ ಮಳೆ ಸುರಿಯುವ ಸಾಧ್ಯತೆ ಇರುವುದಾಗಿ ಹವಾಮಾನ ಇಲಾಖೆ “ಯೆ ಲ್ಲೋ ಅಲರ್ಟ್’ ಘೋಷಿಸಿದೆ. ಮಂಗಳೂರಿನಲ್ಲಿ ಶುಕ್ರವಾರ 34.5 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 0.1 ಡಿ.ಸೆ. ಮತ್ತು 26.8 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 1.8 ಡಿ.ಸೆ. ಉಷ್ಣಾಂಶ ಏರಿಕೆ ಕಂಡಿತ್ತು.