ಪುತ್ತೂರು : ಪುತ್ತೂರು ಪೇಟೆಯಲ್ಲಿ ಸಾಂಕ್ರಾಮಿಕ ರೋಗಗಳು ಬಾಧಿಸಬಾರದು ಎಂಬ ದೃಷ್ಟಿಯಿಂದ ಮುಂಚಿತವಾಗಿ ನಾಲ್ಕು ಸಿಂಪಡಣಾ ಪಂಪ್ ಗಳನ್ನು, ಫಾಗಿಂಗ್ ಯಂತ್ರಗಳನ್ನು ಹಾಗೂ ಮುಂದಿನ ದಿನಗಳಲ್ಲಿ ಕಸ ವಿಲೇವಾರಿಗಾಗಿ ಎರಡು ಮಿನಿ ಟಿಪ್ಪರ್ ಲಾರಿಗಳನ್ನು ಶಾಸಕರ ಮುಖಾಂತರ ನಗರ ಸಭೆಗೆ ಹಸ್ತಾಂತರಿಸಲಾಯಿತು.
ನಾಳೆಯಿಂದಲೇ ಪೂರ್ತಿಯಾಗಿ ವಾರ್ಡ್ ಗಳಲ್ಲಿ ಸಿಂಪಡಣೆ ಮಾಡುವಂತ ಕಾರ್ಯ ಮತ್ತು ಸಮರ್ಪಕವಾಗಿ ಕಸ ವಿಲೇವಾರಿ ಕಾರ್ಯವನ್ನು ಮಾಡಲಾಗುವುದು ಹಾಗೂ ಮುಂದಿನ ದಿನಗಳಲ್ಲಿ ಹಸಿಕಸ ಮತ್ತು ಒಣ ಕಸವನ್ನು ಸಮರ್ಪಕವಾಗಿ ತೆಗೆದುಕೊಂಡು ದೊಡ್ಡ ಮಟ್ಟದಲ್ಲಿ ಬಯೋ ಗ್ಯಾಸ್ ಮಾಡುವಂತಹ ವ್ಯವಸ್ಥೆ ಮಾಡಲಾಗಿದೆ ಎಂದು ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್ ರವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಸ್ವಚ್ಛತೆಯೆಡೆಗೆ ಒಂದು ಹೆಜ್ಜೆ ನಗರ ಸಭೆಯ ಧ್ಯೇಯ ವಾಕ್ಯವಾಗಿದೆ. ಸ್ವಚ್ಛ ಭಾರತ ಶ್ರೇಷ್ಠ ಭಾರತ ಆಗಬೇಕೆನ್ನುವ ದೃಷ್ಟಿಯಿಂದ ಭಾರತದ ಪ್ರಧಾನಿಯವರು ಸ್ವಚ್ಛ ಭಾರತ್ ಮಿಷನ್ ಎಂಬ ಪರಿಕಲ್ಪನೆಯನ್ನು ಜಾರಿಗೆ ತಂದರು. ಈ ಸ್ವಚ್ಛ ಭಾರತ್ ಮಿಷನಡಿಯಲ್ಲಿ ಆತ್ಮ ನಿರ್ಭರ ಭಾರತವಾಗಬೇಕೆನ್ನುವ ಕಲ್ಪನೆಯನ್ನು ಪ್ರಧಾನಿಯವರು ದೇಶದ ಜನತೆಗೆ ಸಂದೇಶವನ್ನು ನೀಡಿದ್ದಾರೆ. ಈ ನಿಟ್ಟಿನಲ್ಲಿ ಆತ್ಮ ನಿರ್ಭರ ಪುತ್ತೂರು ಆಗಬೇಕೆನ್ನುವ ದೃಷ್ಟಿಯಿಂದ ನಗರ ಸಭೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಸೇರಿಕೊಂಡು ನಗರ ಸಭೆಯಲ್ಲಿ ಒಂದಷ್ಟು ಜನರಿಗೆ ಆರೋಗ್ಯವನ್ನು ಕೊಡಬೇಕು, ನಗರ ಸಭೆ ಇಡೀ ರಾಜ್ಯದಲ್ಲಿ ಗುರುತಿಸಲ್ಪಡುವಂತಹ ನಗರ ಸಭೆಯಾಗಬೇಕೆಂದು ಹೇಳಿ ಸ್ವಚ್ಛ ಭಾರತ್ ಮಿಷನ್ ನಡಿಯಲ್ಲಿ ಬರುವ ಅನುದಾನಗಳನ್ನು ಹಾಗೂ ನಗರ ಸಭೆಯ ಅನುದಾನಗಳನ್ನು ಸದ್ಭಳಕೆ ಮಾಡಿಕೊಂಡು ” ಸ್ವಚ್ಛ ಪುತ್ತೂರು ಸುಂದರ ಪುತ್ತೂರು” ಎಂಬ ಕಲ್ಪನೆಯಡಿಯಲ್ಲಿ ಪೂರಕವಾಗಿ ಈ ಕಾರ್ಯಕ್ರಮ ನೆರವೇರಿಸುತ್ತಿದ್ದಾರೆ ಎಂದರು.
ಸಾಂಕ್ರಾಮಿಕ ರೋಗಗಳನ್ನು ಸಮರ್ಪಕವಾಗಿ ತಡೆಗಟ್ಟುವಿಕೆಗಾಗಿ ಹಾಗೂ ಜನರ ಪ್ರಾಣ ರಕ್ಷಣೆ ಮಾಡಲು ನಗರ ಸಭೆ ಬದ್ಧವಾಗಿದೆ. ಸುಮಾರು 30 ಲಕ್ಷದ ಅಂದಾಜಿನಲ್ಲಿ ವಾಹನಗಳು, ಫಾಗಿಂಗ್ ಯಂತ್ರಗಳು, ಸಿಂಪಡಣಾ ಯಂತ್ರಗಳನ್ನು ಕೊಡುವ ಮುಖಾಂತರ ಪುತ್ತೂರು ನಗರ ಸಭೆ 36 ನೇ ಸ್ಥಾನದಿಂದ 6 ನೇ ಸ್ಥಾನಕ್ಕೆ ಬಂದಿದೆ. ಮುಂದಿನ ವರ್ಷದಲ್ಲಿ ಪ್ರಥಮ ಸ್ಥಾನಕ್ಕೆ ಬರುವುದಕ್ಕೆ ಇದು ನಾಂದಿಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರ ಸಭಾ ಅಧ್ಯಕ್ಷ ಜೀವಂಧರ್ ಜೈನ್,ಉಪಾಧ್ಯಕ್ಷೆ ವಿಧ್ಯಾ ಆರ್ ಗೌರಿ, ಪೂಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ನಗರ ಸಭಾ ಸದಸ್ಯ ಗೌರಿ ಬನ್ನೂರು, ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾಧ್ಯಕ್ಷ ಆರ್ ಸಿ ನಾರಾಯಣ್, ಪೌರಾಯುಕ್ತ ಮಧು, ಸಚಿನ್ ಶೆಣೈ, ನಗರ ಸಭಾ ಹಿರಿಯ ಆರೋಗ್ಯ ನಿರೀಕ್ಷಕರು, ಸದಸ್ಯರು ಸಿಬ್ಬಂದಿಗಳು ಉಪಸ್ಥಿತರಿದ್ದರು.