ಕಡಬ ಪೊಲೀಸ್ ಠಾಣಾ ವ್ಯಾಪ್ತಿಯ ಐತೂರು ಗ್ರಾಮದ ಕೆರ್ಮಾಯಿ ಪ್ರದೇಶದ ಮನೆಯೊಂದರಲ್ಲಿ ಮಹಿಳೆಯರು ಹಾಗೂ ಮಕ್ಕಳನ್ನು ಕರೆದುಕೊಂಡು ಬಂದು ಮತಾಂತರ ಹಾಗೂ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇ 7ರಂದು ಪೊಲೀಸರಿಗೆ ಲಭಿಸಿತ್ತು.
ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ವೇಳೆ, ನಾಲ್ಕು ಕುಟುಂಬಗಳಿಗೆ ಸೇರಿದ ಒಟ್ಟು 23 ಮಂದಿ ಗಂಡಸರು, ಮಹಿಳೆಯರು ಮತ್ತು ಮಕ್ಕಳು ಅಲ್ಲಿ ತಂಗಿರುವುದು ಕಂಡುಬಂದಿದೆ.
ಪೊಲೀಸರ ವಿಚಾರಣೆಯಲ್ಲಿ, ಎಲ್ಲರೂ ಬೆಂಗಳೂರಿನ ಪರಿಚಯದವರಾಗಿದ್ದು, ಮಂಗಳೂರಿಗೆ ಪ್ರವಾಸದ ನಿಮಿತ್ತ ಬಂದಿರುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ಪರಿಚಯವಿರುವ ಬೆಂಗಳೂರಿನ ಚರ್ಚ್ ಫಾದರ್ ಅವರ ತಮ್ಮನ ಮನೆಯಲ್ಲಿ ತಂಗಿರುವುದಾಗಿಯೂ ಮಾಹಿತಿ ನೀಡಿದ್ದಾರೆ.
ಇನ್ನಷ್ಟು ವಿಚಾರಣೆ ನಡೆಸಿದಾಗ, ಸಂಬಂಧಪಟ್ಟವರು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದು, ಕಳೆದ 15ರಿಂದ 20 ವರ್ಷಗಳಿಂದ ಸ್ವಯಂಪ್ರೇರಿತವಾಗಿ ಕ್ರಿಶ್ಚಿಯನ್ ಧರ್ಮವನ್ನು ಪಾಲಿಸಿಕೊಂಡು ಬರುತ್ತಿರುವುದಾಗಿ ತಿಳಿಸಿದ್ದಾರೆ. ಯಾವುದೇ ಬಲವಂತದ ಮತಾಂತರ ನಡೆದಿಲ್ಲ ಎಂಬುದೂ ಸ್ಪಷ್ಟವಾಗಿದೆ.
ಈ ಕುರಿತು ನಡೆದ ಪರಿಶೀಲನೆಯಲ್ಲಿ ಯಾವುದೇ ಅನೈತಿಕ ಚಟುವಟಿಕೆ ಅಥವಾ ಬಲವಂತದ ಮತಾಂತರ ನಡೆದಿರುವ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

























