ಪುತ್ತೂರು: ಕೇಂದ್ರ ಸರಕಾರದ
ಬೆಲೆ ಏರಿಕೆ ನೀತಿ ಮತ್ತು ಆಡಳಿತ ವೈಫಲ್ಯ ಆರೋಪಿಸಿ ಪುತ್ತೂರು, ವಿಟ್ಲ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನಿಂದ ಮೇ 18ರಂದು ಪುತ್ತೂರು ಬಸ್ ನಿಲ್ದಾಣದ ಗಾಂಧಿಕಟ್ಟೆಯ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಕೊನೆಯಲ್ಲಿ ಪ್ರತಿಭಟನಾಕಾರರು ಕೆಲ ನಿಮಿಷಗಳ ಕಾಲ ಬಟ್ಟಲು ಬಡಿದು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಬರೆಸುವ ಮೂಲಕ ದೇಶ ಆಳಲು ಸಾಧ್ಯವಿಲ್ಲ- ಅಶೋಕ್ ಕುಮಾರ್ ರೈ: ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಯಾವುದೋ ದೇಶಗಳ ನಡುವೆ ಯುದ್ಧ ಆರಂಭಗೊಂಡ ಎರಡೇ ದಿನದಲ್ಲಿ ನಮ್ಮ ದೇಶದಲ್ಲಿ ಅಡುಗೆ ಅನಿಲ ಸಮಸ್ಯೆ ಉದ್ಭವಿಸಿದೆ. ಇನ್ನು ನಮ್ಮ ದೇಶದ ಜೊತೆ ಯುದ್ಧವಾದರೆ ದೇಶದ ಪರಿಸ್ಥಿತಿ ಹೇಗಿರಬಹುದು. ಇದಕ್ಕೆ ಉತ್ತರ ಕೇಂದ್ರ ಸರಕಾರವೇ ನೀಡಬೇಕು. ಅವರು ಜನರ ಮೇಲೆ ತುರ್ತು ಪರಿಸ್ಥಿತಿ ಹೇರಲಿದ್ದಾರೆ. 6ನೇ ಆರ್ಥಿಕತೆಯಲ್ಲಿರುವ ನಮ್ಮ ದೇಶದ ಖಜಾನೆಯ ವಸ್ತುಸ್ಥಿತಿಯ ಬಗ್ಗೆ ಕೇಂದ್ರ ಸರಕಾರ ತಿಳಿಸಲಿ. 2 ಸಾವಿರ ಮಂದಿಯನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬರೆಸುವ ಮೂಲಕ ದೇಶ ಆಳಲು ಸಾಧ್ಯವಿಲ್ಲ. ಗ್ಯಾಸ್, ಪೆಟ್ರೋಲ್ ದರ ಏರಿಕೆಯಾದರೂ ಯಾರು ಮಾತನಾಡುವುದಿಲ್ಲ. ಬಿಜೆಪಿ ವಿರೋಧ ಪಕ್ಷದಲ್ಲಿರುತ್ತಿದ್ದರೆ ಗಲ್ಲಿ ಗಲ್ಲಿಗಳಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಯುದ್ದದ ಬಗ್ಗೆ ನಮಗೂ ಜ್ಞಾನವಿದೆ. ಪೆಟ್ರೋಲಿಯಂ ಉತ್ಪನ್ನ ಬೇರೆ ದೇಶದಲ್ಲಿ ಸಿಗುವುದಿಲ್ವಾ ಎಂದು ಪ್ರಶ್ನಿಸಿದರು.
ನಾವು ಪ್ರತಿಷ್ಠೆಗಾಗಿ ಪ್ರತಿಭಟನೆ
ಮಾಡುವುದಲ್ಲ. ದೇಶದ ಜನರ ವೇದನೆ ತಿಳಿಸುವುದಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ಇದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆಗಿರುವ ನೋವು ಅಲ್ಲ. ದೇಶದ ಸಮಸ್ತ ಜನತೆಯ ಸಮಸ್ಯೆಯಾಗಿದೆ. ಪೆಟ್ರೋಲ್ ಪಂಪ್ಗಳಲ್ಲಿ ನೋ ಸ್ಟಾಕ್ ಬೋರ್ಡ್ ಇದ್ದು ಪಂಪು ನಡೆಸುವ ಬಿಜೆಪಿಯವರಿಗೂ ಇದರ ಬಿಸಿ ಮುಟ್ಟಿದೆ. ನನ್ನ ಮೇಲೂ ಇನ್ಕಂ ಟ್ಯಾಕ್ಸ್ ದಾಳಿ ನಡೆಸಿದ್ದರು ಎಂದು ಹೇಳಿದ ಅಶೋಕ್ ರೈ ಅವರು, ಭ್ರಷ್ಟಾಚಾರ ನಿಲ್ಲಿಸುವುದಾಗಿ ಹೇಳಿದವರು ನೀಟ್ ಪರೀಕ್ಷೆಯ ಪ್ರಕರಣವನ್ನು ಸಿಬಿಐ, ಎನ್ಐಎಗೋ ನೀಡಲಿ, ಅಂಬಾನಿ, ಆದಾನಿ ಹಾಗೂ ಅಮಿತ್ ಶಾ ಅವರ ಮಗನ ಕೈಯಲ್ಲಿ ದೇಶದ ಆರ್ಥಿಕತೆಯಿದೆ. ಅವರು ಮಾತ್ರ ಹಣ ಮಾಡುತ್ತಿದ್ದಾರೆ. ದೇಶದ ಸಿಮೆಂಟ್ ಕಂಪನಿ ಆದಾನಿ ಕೈಯಲ್ಲಿದೆ. ಸಚಿವೆ ನಿರ್ಮಲ ಸೀತಾರಾಮನ್ ಬೀಡಿ ಕಟ್ಟುವವರಿಗೂ ಶೇ.18 ತೆರಿಗೆ ವಿಧಿಸಿದ್ದಾರೆ ಎಂದು ಹೇಳಿದರು.
ದೇಶದ ಪ್ರಧಾನಿಯವರ ಮಾತಿಗೆ ಅರ್ಥವಿದೆ. ಅದಕ್ಕಾಗಿ ಕೊರೋನಾ ಸಮಯದಲ್ಲಿ ರಾತ್ರಿ 8 ಗಂಟೆಗೆ ಲೈಟ್ ಆಫ್ ಮಾಡಿ ಬಟ್ಟಲು ಬಡಿಯಲು ಹೇಳಿದ್ದರು. ಕೊರೋನಾ ಹೋಗಲಿ ಎಂದು ನಾವೂ ಬಟ್ಟಲು ಬಡಿದಿದ್ದೇವೆ. ದೇಶದ ಈಗಿನ ಪರಿಸ್ಥಿತಿಯನ್ನು ಹೋಗಲಾಡಿಸಲು ಬಟ್ಟಲು ಬಡಿಯುತ್ತಿದ್ದೇವೆ. ಹೇಳಿಕೆ ಕೊಟ್ಟವರಿಗೇ ಮತ್ತೆ ಬಟ್ಟಲು ಬಡಿದು ತಿಳಿಸುತ್ತಿದ್ದೇವೆ. ದೇಶದ ಮೇಲೆ ನಮಗೂ ಪ್ರೀತಿಯಿದೆ. ಭಾರತ ಮಾತೆಯ ಮೇಲೆ ಗೌರವವಿದೆ. ಬಟ್ಟಲು ಬಡಿದು ದೇಶಕ್ಕೆ ಹಿಡಿದ ಶನಿಯನ್ನು ಓಡಿಸಲಾಗುವುದು. ಪುತ್ತೂರಿನಿಂದ ಆರಂಭವಾದ ಬಟ್ಟಲು ಬಡಿಯುವ ಪ್ರಕ್ರಿಯೆ ದೇಶದಾದ್ಯಂತ ವ್ಯಾಪಿಸಲಿದೆ ಎಂದು ಹೇಳಿದರು.



























