ಪುತ್ತೂರು: ಬನ್ನೂರಿನಲ್ಲಿರುವ ವೈಜ್ಞಾನಿಕ ಘನತ್ಯಾಜ್ಯ ಸಂಸ್ಕರಣ ಘಟಕ ಪಕ್ಕದಲ್ಲೇ ಇದ್ದರೂ ದೈವಸ್ಥಾನಕ್ಕೆ ಹೋಗುವ ದಾರಿಯಲ್ಲೇ ಕಿಡಿಗೇಡಿಗಳು ತ್ಯಾಜ್ಯಗಳನ್ನು ಸುರಿದು ಹೋಗುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಕಳೆದ ಹಲವಾರು ಸಮಯಗಳಿಂದ ಲಾರಿಗಳಿಂದ ಬಂದ ತ್ಯಾಜ್ಯಗಳನ್ನು ಘನತ್ಯಾಜ್ಯ ಸಂಸ್ಕರಣ ಘಟಕದ ಪಕ್ಕದಲ್ಲಿ ದೈವಸ್ಥಾನವೊಂದಕ್ಕೆ ಹೋಗುವ ಸಾರ್ವಜನಿಕ ರಸ್ತೆಯ ಬದಿಯಲ್ಲೇ ಸುರಿದು ಹೋಗುತ್ತಿದ್ದಾರೆ. ಇದರಿಂದ ಕೆಟ್ಟ ವಾಸನೆ ಜೊತೆಗೆ ರೋಗ ರುಜಿನಗಳಿಂದ ಪರಿಸರ ಕೆಡುವ ಸಾಧ್ಯತೆ ಇದೆ.
ಈ ಕುರಿತು ನಗರಸಭೆಗೆ ಹಲವಾರು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇನ್ನು ಪ್ರತಿಭಟನೆಯೊಂದೇ ದಾರಿ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.



























