ಉಪ್ಪಿನಂಗಡಿ: ಖಾಸಗಿ ಬಸ್ಸುಗಳ ಟೈಮಿಂಗ್ಸ್ ವಿಚಾರದಲ್ಲಿ ಉಂಟಾದ ವಾಗ್ವಾದ ಹಾಡಹಗಲೇ ಕಬ್ಬಿಣದ ರಾಡ್ ನೊಂದಿಗೆ ಬಸ್ಸಿನೊಳಗೆ ನುಗ್ಗಿ ಪ್ರಯಾಣಿಕರ ಸಮ್ಮುಖದಲ್ಲೇ ಮಾರಾಮಾರಿಗೆ ತೊಡಗಿದ್ದ ಇಬ್ಬರು ಖಾಸಗಿ ಬಸ್ ನಿರ್ವಾಹಕರ ಮೇಲೆ ಉಪ್ಪಿನಂಗಡಿ ಪೊಲೀಸರು ಸುಮೋಟೋ ಈ ಪ್ರಕರಣ ದಾಖಲಿಸಿದ್ದಾರೆ.
ಉಪ್ಪಿನಂಗಡಿಯಿಂದ ಮಂಗಳೂರಿಗೆ ಪ್ರಯಾಣಿಕ ಸೌಲಭ್ಯವನ್ನು ಒದಗಿಸುವ ಅರಫಾ ಮತ್ತು ಲಕ್ಷ್ಮೀ ಬಸ್ಸುಗಳ ನಿರ್ವಾಹಕರ ನಡುವೆ ಜು.14ರಂದು ಸಮಯದ ವಿಚಾರದಲ್ಲಿ ಜಗಳ ನಡೆದು, ಅರಫಾ ಬಸ್ಸಿನ ನಿರ್ವಾಹಕ ನೌಶಾದ್ ಎಂಬಾತ ಕಬ್ಬಿಣದ ದಿ ರಾಡ್ ನೊಂದಿಗೆ ಲಕ್ಷ್ಮೀ ಬಸ್ಸಿನೊಳಗೆ ಪ್ರಯಾಣಿಕರು ಕುಳಿತಿದ್ದಂತೆಯೇ ನುಗ್ಗಿ ಅದರ ನಿರ್ವಾಹಕ ಖಲಂದರ್ ಯಾನೆ ಶಾಹೀದ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾಗಿ ಆರೋಪಿಸಲಾಗಿದೆ.
ಈವೇಳೆ ಶಾಹೀದ್ ಕೂಡಾ ನೌಶಾದ್ ಮೇಲೆ ಕೈಯಿಂದ ಹಲ್ಲೆ ಮಾಡಿದ ಪರಿಣಾಮ ಇಬ್ಬರಿಗೂ ಗಾಯಗಳಾಗಿವೆ. ಇಬ್ಬರೂ ಕೂಡಾ ಪುತ್ತೂರುಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರೂ ಯಾರೊಬ್ಬರೂ ಪೊಲೀಸರಿಗೆ
ದೂರು ನೀಡಿರಲಿಲ್ಲ.
ಹಾಡಹಗಲೇ ಸಾರ್ವಜನಿಕರ ಸಮ್ಮುಖದಲ್ಲಿ, ಪ್ರಯಾಣಿಕರು ಬಸ್ಸಿನೊಳಗೆ ಕುಳಿತ್ತಿದ್ದ ವೇಳೆ ಬಸ್ಸಿಗೆ ನುಗ್ಗಿ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆಸಿ ಸಾರ್ವಜನಿಕ ಶಾಂತಿ ಭಂಗವನ್ನುಂಟು ಮಾಡಿದ ಕಾರಣಕ್ಕೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

























