ಸುಬ್ರಹ್ಮಣ್ಯ: ಭಾರತೀಯ ಚುನಾವಣ ಆಯೋಗ ನಡೆಸುತ್ತಿರುವ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ (ಎಸ್ಐಆರ್) ಕಾರ್ಯದಲ್ಲಿ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್ಒ) ಕರ್ತವ್ಯನಿಷ್ಠೆಗೆ ಸಾಕ್ಷಿಯಾಗುವ ಘಟನೆ ಸುಬ್ರಹ್ಮಣ್ಯ ಸಮೀಪದ ಐನೆಕಿದು ಗ್ರಾಮದ ಬಾಣೂರು ಪ್ರದೇಶದಲ್ಲಿ ಸಂಭವಿಸಿದೆ.
ಬಾಣೂರು ಸಮೀಪ ಹೊಳೆಯ ಆಚೆ ಕೇವಲ ಮೂರು ಮನೆಗಳಿದ್ದು, ಅಲ್ಲಿಗೆ ನೇರ ರಸ್ತೆ ಸಂಪರ್ಕವಿಲ್ಲ. ರಸ್ತೆ ಮಾರ್ಗವಾಗಿ ತೆರಳಬೇಕಾದರೆ ಬಾಳುಗೋಡು ಮಾರ್ಗವಾಗಿ ಬಹುದೂರ ಸುತ್ತಿಹೋಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ ಶಿಕ್ಷಕರೂ ಆಗಿರುವ ಬಿಎಲ್ ಒ ಲೋಹಿತ್ ಹಾಗೂ ಬಿಎಲ್ಎ ಗುಣವರ್ಧನ ಸ್ಥಳೀಯರು ಬಳಸುವ ಹಗ್ಗದ ಮೂಲಕವೇ ಹೊಳೆ ದಾಟಿ ಮತದಾರರನ್ನು ಭೇಟಿ ಮಾಡಿದರು.
ಅಗತ್ಯ ದಾಖಲೆಗಳು ಹಾಗೂ ಪರಿಕರಗಳನ್ನು ಹೊತ್ತುಕೊಂಡು ಹಗ್ಗದ ಮೇಲೆ ಅಳವಡಿಸಿದ ಪರಿಕರದ ಮೂಲಕ ದಾಟಿದ ಅವರು, ಮೂರು ಮನೆಗಳಲ್ಲಿರುವ ಮತದಾರರ ವಿವರಗಳನ್ನು ಪರಿಶೀಲಿಸಿ ಎಸ್ಐಆರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದರು.
ಈ ಮೂರು ಮನೆಗಳಲ್ಲಿ ಒಬ್ಬ ಮತದಾರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರಿಗೆ ಹೊಳೆ ದಾಟಿ ಹೊರಬರುವುದು ಸಾಧ್ಯವಾಗಿರಲಿಲ್ಲ. ಹೀಗಾಗಿ ಬಿಎಲ್ಒ ಅವರೇ ಮನೆಗೆ ತೆರಳಿ ದಾಖಲೆಗಳ ಪರಿಶೀಲನೆ ನಡೆಸುವುದು ಅನಿವಾರ್ಯವಾಗಿತ್ತು. ರಸ್ತೆ ಮಾರ್ಗವಾಗಿ ತೆರಳಿದ್ದರೆ ಬಹುದೂರ ಸುತ್ತಬೇಕಾಗುತ್ತಿದ್ದ ಕಾರಣ ಸಮಯ ಉಳಿತಾಯದ ದೃಷ್ಟಿಯಿಂದ ಹಗ್ಗದ ಮೂಲಕ ಹೊಳೆ ದಾಟುವ ಸಮೀಪದ ಮಾರ್ಗವನ್ನೇ ಆಯ್ಕೆ ಮಾಡಿಕೊಂಡರು.
ಬಾಣೂರು ಭಾಗದಲ್ಲಿ ಶಾಶ್ವತ ಸೇತುವೆ ಇಲ್ಲದ ಕಾರಣ ಸ್ಥಳೀಯರು ದೈನಂದಿನ ಸಂಚಾರಕ್ಕೂ ಇದೇ ಹಗ್ಗದ ಮಾರ್ಗವನ್ನು ಬಳಸುತ್ತಾರೆ. ಮಳೆ ಕಡಿಮೆಯಿದ್ದರಿಂದ ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿರಲಿಲ್ಲ. ಇದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಿಕೊಂಡು ಹೊಳೆ ದಾಟಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಯಿತು.
ಬಿಳಿನೆಲೆಬೈಲು ಸರಕಾರಿ ಶಾಲೆಯ ಶಿಕ್ಷಕರೂ ಆಗಿರುವ ಲೋಹಿತ್ ಅವರ ವ್ಯಾಪ್ತಿಯಲ್ಲಿ ಸುಮಾರು 793 ಮತದಾರರು ಹಾಗೂ 200ಕ್ಕೂ ಅಧಿಕ ಮನೆಗಳಿವೆ. ಕಳೆದ ಹದಿನೈದು ದಿನಗಳಿಂದ ಅವರು ಬಿಎಲ್ಎ ಗುಣವರ್ಧನ ಅವರೊಂದಿಗೆ ಮನೆಮನೆಗೆ ತೆರಳಿ ಎಸ್ಐಆರ್ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.


























