ಉಪ್ಪಿನಂಗಡಿ: ಪುತ್ತೂರಿನ ಹಾರಾಡಿ ಬಳಿ ರಸ್ತೆ ವಿಸ್ತರಣಾ ಕಾಮಗಾರಿ ಹಿನ್ನೆಲೆಯಲ್ಲಿ ಬಸ್ಗಳು ಬದಲಿ ಮಾರ್ಗದಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ, ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಿಂದ ಉಪ್ಪಿನಂಗಡಿಗೆ ಬಸ್ ಏರಿದ ವಿದ್ಯಾರ್ಥಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನಿರಾಕರಿಸಿದ ಆರೋಪ ಕೇಳಿಬಂದಿದೆ. ಈ ಕುರಿತು ವಿದ್ಯಾರ್ಥಿಯೋರ್ವ ಮುಖ್ಯಮಂತ್ರಿ ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪುತ್ತೂರಿನಿಂದ ಉಪ್ಪಿನಂಗಡಿಗೆ ಸಂಚರಿಸುವ ಬಸ್ಗಳು ಸಾಮಾನ್ಯವಾಗಿ ಬೊಳ್ವಾರ್ ಮಾರ್ಗವಾಗಿ ತೆರಳುತ್ತವೆ. ಈ ಹಿನ್ನೆಲೆಯಲ್ಲಿ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳು ಬೊಳ್ವಾರ್ ಜಂಕ್ಷನ್ನಲ್ಲಿ ಬಸ್ ಏರಿ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದರು. ಆದರೆ ಹಾರಾಡಿ ಬಳಿ ರಸ್ತೆ ವಿಸ್ತರಣಾ ಕಾಮಗಾರಿ ನಡೆಯುತ್ತಿರುವುದರಿಂದ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
ಇದರಿಂದ ಉಪ್ಪಿನಂಗಡಿ ಕಡೆಗೆ ತೆರಳುವ ಬಸ್ಗಳು ಬೊಳ್ವಾರ್ ಮಾರ್ಗವನ್ನು ಬಿಟ್ಟು ಪುತ್ತೂರು ಬಸ್ ನಿಲ್ದಾಣದಿಂದ ಎಪಿಎಂಸಿ ಮಾರ್ಗವಾಗಿ ತೆರಳಿ ಕೋಟೇಚಾ ಹಾಲ್ ಬಳಿ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸುತ್ತಿವೆ. ಹೀಗಾಗಿ ಬೊಳ್ವಾರ್ನಲ್ಲಿ ಬಸ್ ಏರುತ್ತಿದ್ದ ಪ್ರಯಾಣಿಕರು ಇದೀಗ ಬಸ್ ನಿಲ್ದಾಣದಿಂದಲೇ ಬಸ್ ಏರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಆ.12ರಂದು ಸಂಜೆ ಸುಮಾರು 3.30ಕ್ಕೆ ಪುತ್ತೂರಿನಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್ನಲ್ಲಿ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದ ವಿವೇಕಾನಂದ ಕಾಲೇಜಿನ ತೃತೀಯ ವರ್ಷದ ಬಿಸಿಎ ವಿದ್ಯಾರ್ಥಿ, ಉಪ್ಪಿನಂಗಡಿಯ ದೂಜಮೂಲೆ ನಿವಾಸಿ ಜಿತೇಶ್ ಎನ್. ಸೇರಿದಂತೆ ನಾಲೈದು ವಿದ್ಯಾರ್ಥಿಗಳಿಗೆ ಬಸ್ ನಿರ್ವಾಹಕರು ಪೂರ್ಣ ಟಿಕೆಟ್ ದರ ಪಾವತಿಸುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ.
ವಿದ್ಯಾರ್ಥಿಗಳ ಬಸ್ ಪಾಸ್ನಲ್ಲಿ ಪ್ರಯಾಣ ಆರಂಭದ ಸ್ಥಳವಾಗಿ ‘ಬೊಳ್ವಾರ್’ ನಮೂದಾಗಿದ್ದು, ಬಸ್ ನಿಲ್ದಾಣದಿಂದ ಪ್ರಯಾಣ ಆರಂಭಿಸಿರುವುದು ನಿಯಮಬಾಹಿರ ಎಂದು ನಿರ್ವಾಹಕರು ತಿಳಿಸಿದ್ದಾರೆ ಎನ್ನಲಾಗಿದೆ. ಬೊಳ್ವಾರ್ನಲ್ಲಿ ಪ್ರಸ್ತುತ ಬಸ್ ಸಂಚಾರವೇ ಇಲ್ಲ ಎಂದು ವಿದ್ಯಾರ್ಥಿಗಳು ವಿವರಿಸಿದರೂ, ದೂರು ನೀಡಬೇಕಾದರೆ ನೀಡಬಹುದು, ಸದ್ಯ ಟಿಕೆಟ್ ದರ ಪಾವತಿಸಬೇಕು ಎಂದು ನಿರ್ವಾಹಕರು ಹೇಳಿ ಹಣ ಪಡೆದಿದ್ದಾರೆ ಎಂದು ಜಿತೇಶ್ ದೂರಿನಲ್ಲಿ ಆರೋಪಿಸಿದ್ದಾರೆ.
ವಾಹನ ಸಂಚಾರಕ್ಕೆ ಅಸಾಧ್ಯವಾದ ಹಿನ್ನೆಲೆಯಲ್ಲಿ ಬಸ್ಗಳ ಮಾರ್ಗವನ್ನು ಬದಲಾಯಿಸಿರುವುದು ನಿಗಮದ ನಿರ್ಧಾರವಾಗಿದೆ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ಅಮಾನ್ಯ ಎಂದು ಪರಿಗಣಿಸಿರುವುದು ಸರ್ಕಾರ ನೀಡಿರುವ ಸೌಲಭ್ಯವನ್ನು ನಿರಾಕರಿಸಿದಂತಾಗಿದೆ ಎಂದು ಜಿತೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ನ್ಯಾಯ ಒದಗಿಸುವಂತೆ ಮುಖ್ಯಮಂತ್ರಿ ಅವರಿಗೆ ದೂರು ಸಲ್ಲಿಸಿರುವ ಜಿತೇಶ್, ಕೆಎಸ್ಸಾರ್ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೂ ದೂರು ನೀಡಿ ಕ್ರಮಕ್ಕೆ ಮನವಿ ಮಾಡಿದ್ದಾರೆ.



























