ಪುತ್ತೂರು: ಶಿಕ್ಷಕ ವೃತ್ತಿಯು ಉದಾತ್ತವೂ ಪವಿತ್ರವೂ ಆಗಿದೆ. ಮಾನವ ಸಂಪನ್ಮೂಲದ ಸೃಜನಶೀಲತೆಯ ಅಮೋಘ ಕಾಯಕವಾಗಿದೆ. ಶಿಕ್ಷಕವೃತ್ತಿ ಎಂದು ಪರಿಭಾವಿಸದೆ ಸಮಾಜದ ಸೇವಾ ಕಾರ್ಯವೆಂದು ತಿಳಿದು ಕರ್ತವ್ಯ ನಿರ್ವಹಿಸಿದಾಗ ನಿಜವಾದ ಆಚಾರ್ಯರಾಗುತ್ತಾರೆ. ತತ್ವಜ್ಞಾನಿ ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಿಗೆಲ್ಲಾ ಆದರ್ಶವಾಗಿದ್ದು ಅವರ ಜನುಮ ದಿನದಂದು ಸಮಾಜ, ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಂಡಿರುವ ಹಿರಿಯಶಿಕ್ಷಕರನ್ನು ಪುರಸ್ಕರಿಸುವುದು ಪವಿತ್ರ ಕಾರ್ಯವಾಗಿದೆ ಎಂದು ಮುಂಬಯಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ತಾಳ್ತಜೆ ವಸಂತ ಕುಮಾರ್ ಹೇಳಿದರು.
ಅವರು ಜಿ.ಎಲ್.ಆಚಾರ್ಯ ಸಂಸ್ಮರಣೆಯ ಅಂಗವಾಗಿ ಶಿಕ್ಷಕದಿನಾಚರಣೆ ಸಂದರ್ಭ ಪುತ್ತೂರು ಜಿ.ಎಲ್.ಆಚಾರ್ಯ ಸಂಭಾಂಗಣದಲ್ಲಿ ಏರ್ಪಡಿಸಲಾದ ಆಚಾರ್ಯ ಪುರಸ್ಕಾರ , ಕವಿಗೋಷ್ಠಿಯಲ್ಲಿ ಆಚಾರ್ಯ ಸಂದೇಶ ನೀಡಿ ಮಾತನಾಡಿದರು.
ಜಿ.ಎಲ್.ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಬಲರಾಮ ಆಚಾರ್ಯರು ಕಾರ್ಯಕ್ರಮದ ಬಗ್ಗೆ ಮಾತನಾಡಿ ಜಿ.ಎಲ್.ಆಚಾರ್ಯರು ಉದ್ಯಮದೊಂದಿಗೆ ಸಮಾಜಸೇವೆಗೆ ಆದ್ಯತೆ ನೀಡುತ್ತಿದ್ದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆಸಲ್ಲಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿಯೂ ವಿಶೇಷ ಆಸಕ್ತಿ ಹೊಂದಿದ್ದರು ಎಂದು ನೆನಪಿಸಿಕೊಂಡರು.
ನಿವೃತ್ತಿಯಾದ ಬಳಿಕ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಮುಖ್ಯೋಪಾಧ್ಯಾಯರಾದ ಮುನಿರಾಜ ರೆಂಜಾಳ , ನಿವೃತ್ತಶಿಕ್ಷಕ ಪೆರಾಜೆ ಸೀತಾರಾಮ ಭಟ್ , ನೆಹರು ಮೆಮೋರಿಯಲ್ ಕಾಲೇಜು ಸುಳ್ಯದ ಆಡಳಿತಾಧಿಕಾರಿ ಚಂದ್ರಶೇಖರ ಪೇರಾಲ್ , ವಿವೇಕಾನಂದ ಕಾಲೇಜಿನ ನಿವೃತ್ತ ಗಣಿತಉಪನ್ಯಾಸಕಿ ಪ್ರೊ. ವತ್ಸಲಾ ರಾಜ್ಞಿಯವರನ್ನು ಆಚಾರ್ಯ ಪುರಸ್ಕಾರ ನೀಡಿ ಗೌರವಿಸಲಾಯಿತು.
ಜಿ.ಎಲ್. ಆಚಾರ್ಯ ಜ್ಯುವೆರ್ಸ್ನ ಲಕ್ಷ್ಮೀ ಕಾಂತ ಆಚಾರ್ಯ ಉದ್ಘಾಟಿಸಿ ಶುಭಹಾರೈಸಿದರು. ಕೇರಳ ರಾಜ್ಯ ಕ.ಚು.ಸಾ.ಪ. ದ ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಪ್ರಸ್ತಾವನೆ ಗೈದರು. ಕ.ಚು.ಸಾ.ಪ. ರಾಜ್ಯ ಉಪಾಧ್ಯಕ್ಷೆ ಡಾ.ಶಾಂತ ಪುತ್ತೂರು ಉಪಸ್ಥಿತರಿದ್ದರು. ಶಿಕ್ಷಕರಾದ ನಾರಾಯಣ ನಾಯ್ಕ್ ಪುಣಚ ಸ್ವಾಗತಿಸಿದರು. ಶಿಕ್ಷಕಿಯರಾದ ಪೂರ್ಣಿಮಾ ಪೆರ್ಲಂಪಾಡಿ,ಮಲ್ಲಿಕಾ ರೈ, ನಳಿನಿ ಡಿ, ಡಾ.ಮೈತ್ರಿ ಭಟ್,ಡಾ.ಗೀತಾ ಕುಮಾರಿ , ಹೇಮಲತಾ ಕಜೆಗದ್ದೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು. ಶಿಕ್ಷಕಿ ಯಶುಭ ರೈ ಪ್ರಾರ್ಥಿಸಿ,ಶಿಕ್ಷಕಿ ಪುಷ್ಪಲತಾ ಎಮ್.ನಿರೂಪಿಸಿದರು.



























