ವಿಟ್ಲಪಡ್ನೂರು: ಪಂಚಾಯತ್ ಕಚೇರಿಯಲ್ಲಿ ವ್ಯಾಕ್ಸಿನ್ ಗಾಗಿ ಕಾದು ಸುಸ್ತಾದ ಜನ, ಆರೋಗ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೇ, ಕೋವಿಡ್ ವ್ಯಾಕ್ಸಿನ್ ಶಿಬಿರದಲ್ಲಿ ಪಂಚಾಯತ್ ಸದಸ್ಯರು ತಮ್ಮ ಪರಿಚಯಸ್ಥರಿಗೆ ವ್ಯಾಕ್ಸಿನ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದ ಘಟನೆ ಆ.2 ರಂದು ನಡೆದಿದೆ.
ಪಂ.ಕಛೇರಿಯಲ್ಲಿ ವ್ಯಾಕ್ಸಿನ್ ಶಿಬಿರ ನಡೆಯಲಿರುವ ಬಗ್ಗೆ ಆರೋಗ್ಯ ಸಿಬ್ಬಂದಿಗಳು ಮತ್ತು ಆಶಾ ಕಾರ್ಯಕರ್ತೆಯರು ಮಾಹಿತಿ ನೀಡಿದ್ದರು. ಇದರಂತೆ ಬೆಳಗ್ಗೆನೇ ನೂರಾರು ಜನರು ಕೇಂದ್ರದಲ್ಲಿ ಸೇರಿದ್ದು ಆರೋಗ್ಯ ಸಿಬ್ಬಂದಿಗಳ ಆಗಮನಕ್ಕಾಗಿ ಕಾದಿದ್ದೆವು. ಬಳಿಕ ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ವ್ಯಾಕ್ಸಿನ್ ಪಡೆಯಲು ಕಾದು ನಿಂತಿದ್ದ ಗ್ರಾಮಸ್ಥರಿಗೆ ಟೋಕನ್ ನೀಡಬೇಕಿತ್ತು, ಆದರೆ ಅಷ್ಟರಲ್ಲಾಗಲೇ 120 ಟೋಕನುಗಳು ಪಂಚಾಯತ್ ಸದಸ್ಯರುಗಳ ಕೈವಶವಾಗಿದೆ. ತಮ್ಮ ಸಹವರ್ತಿಗಳಿಗೆ ಬೇಕಾಗುವಷ್ಟು ಟೋಕನುಗಳನ್ನು ಆಯಾಯಾ ಪಂ.ಸದಸ್ಯರುಗಳು ಕೈವಶ ಮಾಡಿಕೊಂಡಿದ್ದಾರೆ. ಪಂ.ಸದಸ್ಯರುಗಳ ಮೂಲಕವೇ ವ್ಯಾಕ್ಸಿನ್ ಪಡೆಯಬೇಕೋ ಅಥವಾ ಆರೋಗ್ಯ ಸಿಬ್ಬಂದಿಗಳಿಂದ ನೇರವಾಗಿ ಪಡೆಯಬೇಕೋ ಎಂಬುದು ಉತ್ತರಸಿಗದ ಪ್ರಶ್ನೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆರೋಗ್ಯ ಇಲಾಖೆಯು ನಿಷ್ಪಕ್ಷಪಾತವಾಗಿ ನೀಡಬೇಕಾಗಿದ್ದ ವ್ಯಾಕ್ಸಿನ್ ಗಳಲ್ಲೂ ಪಂ.ಸದಸ್ಯರುಗಳು ಹಸ್ತಕ್ಷೇಪ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿಗಳು ಸೂಕ್ತ ತನಿಖೆ ನಡೆಸಿ ನ್ಯಾಯ ನೀಡಬೇಕೆಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಯವರನ್ನು ಒತ್ತಾಯಿಸಿ ಪತ್ರವನ್ನೂ ಕೂಡ ಬರೆದಿದ್ದಾರೆ.