ಉಪ್ಪಿನಂಗಡಿ: ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ನಡಿಗೆ ಉದ್ದೇಶದೊಂದಿಗೆ ರಾಜ್ಯದಾದ್ಯಂತ ನಡಿಗೆ ಕಾರ್ಯಕ್ರಮ ಹಾಕಿಕೊಂಡು ನಡೆದುಕೊಂಡು ಬಂದ ಬೆಂಗಳೂರು ಆರ್.ಟಿ.
ನಗರದ ವಿವೇಕಾನಂದ ಹೆಚ್.ಕೆ. ಅವರನ್ನು ಆ. 9 ರಂದು ಹೋಟೆಲ್ ತುಳುನಾಡು ಬಳಿ ಗ್ರಾಮಸ್ಥರ ವತಿಯಿಂದ ಸ್ವಾಗತಿಸಿದರು.
2020 ನವೆಂಬರ್ 1ರಂದು ಬೀದರ್ ಜಿಲ್ಲೆ ಔರಾದ್ ವನಮಾರಪಳ್ಳಿಯಿಂದ ನಡಿಗೆ ಮೂಲಕ ಹೊರಟಿರುವ ವಿವೇಕಾನಂದರವರು ಗುಲ್ಬರ್ಗಾ, ಯಾದಗಿರಿ, ರಾಯಚೂರು, ಬಿಜಾಪುರ,
ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ಬಳ್ಳಾರಿ, ಹಾವೇರಿ, ಉತ್ತರಕನ್ನಡ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಉಡುಪಿ, ದ.ಕ. ಜಿಲ್ಲೆಯ ಬೆಳ್ತಂಗಡಿ
ಮೂಲಕ ಈಗಾಗಲೇ 8500 ಕಿ.ಲೋ ಮೀಟರ್ ಕ್ರಮಿಸಿ ಬಂದಿರುವ ಇವರು ಆ.9 ರಂದು ಸಂಜೆ ಉಪ್ಪಿನಂಗಡಿ ತಲುಪಿದರು.
ಚಾಮರಾಜನಗರದಲ್ಲಿ ಮುಕ್ತಾಯ: ಸೋಮವಾರ ರಾತ್ರಿ ಉಪ್ಪಿನಂಗಡಿ ಹೊಟೇಲ್ ನಲ್ಲಿ ಮೊಕ್ಕಾಂ ಮಾಡಿ ಆ. 10 ರಂದು ಮತ್ತೆ ನಡಿಗೆ ಮುಂದುವರಿಸಿ ಮುಂದೆ ಕೊಡಗು, ಹಾಸನ, ತುಮಕೂರು, ಚಿಕ್ಕಬಳ್ಳಾಪುರ ಹೀಗೆ ಮುಂದುವರೆಸಿ ಎಲ್ಲಾ 31 ಜಿಲ್ಲೆಯನ್ನು ಸಂಚರಿಸಿ ಡಿಸೆಂಬರ್ ತಿಂಗಳಿನಲ್ಲಿ ಚಾಮರಾಜನಗರದಲ್ಲಿ ನಡಿಗೆಯನ್ನು ಮುಕ್ತಾಯಗೊಳಿಸಲಾಗುವುದು ಎಂದು ವಿವೇಕಾನಂದ ಹೆಚ್.ಕೆ ಮಾಧ್ಯಮದವರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಮಾನವೀಯ ಮೌಲ್ಯಗಳು ನಶಿಸಿ ಹೋಗಿದೆ: ನಮ್ಮಲ್ಲಿನ ಮಾನವೀಯ ಮೌಲ್ಯಗಳು ನಶಿಸಿ ಹೋಗಿದ್ದು, ಇದರ ಮತ್ತೆ ಪುನರುತ್ಥಾನ ಮಾಡುವುದಕ್ಕಾಗಿ, ಅದರ ಜಾಗೃತಿ ಮೂಡಿಸುವ ಸಲುವಾಗಿ ಈ ನಡಿಗೆ ಆರಂಭಿಸಿದ್ದೇನೆ. ಈಗಾಗಲೇ 18 ಜಿಲ್ಲೆಯನ್ನು ದಾಟಿ ಬಂದಿದ್ದೇನೆ. ಇದೊಂದು ನನ್ನ ಪ್ರಯತ್ನವಾಗಿದ್ದು, ನಡಿಗೆ ಸಂದರ್ಭದಲ್ಲಿ ಬಹಳಷ್ಟು ಕಡೆಗಳಲ್ಲಿ ಸಂಘ ಸಂಸ್ಥೆಯ ಮಂದಿ ಪ್ರೋತ್ಸಾಹ ನೀಡಿ ಸ್ವಾಗತಿಸಿದ್ದಾರೆ ಎಂದು ತಿಳಿಸಿದರು.
ವಿವೇಕಾನಂದರವರು ಬೆಂಗಳೂರುನಲ್ಲಿ ಜಾಹೀರಾತು ಸಂಸ್ಥೆಯನ್ನು ಹೊಂದಿದ್ದು, ಕೆಲ ವರ್ಷಗಳಿಂದ ಅದನ್ನು ಬಿಟ್ಟು ಸಾಮಾಜಿಕ ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಜಗನ್ನಾಥ್ ಶೆಟ್ಟಿ ನಡುಮನೆ, ಜಯಪ್ರಕಾಶ್ ಬದಿನಾರು, ಮುರಳೀಧರ ರೈ ಮಠಂತಬೆಟ್ಟು, ಉಗ್ಗಪ್ಪ ಪೂಜಾರಿ ಪರನೀರು, ಪೂರ್ಣಿಮಾ ಯತೀಶ್ ಶೆಟ್ಟಿ ಬರಮೇಲು , ಬಾಬು ಬರಮೆಲು, ಯೊಗೀಶ್ ಸಾಮಾನಿ ಸಂಪಿಗೆದಡಿ, ಶಶಿಧರ ಪೂಜಾರಿ ಡೆಕ್ಕಾಜೆ, ವಿಕ್ರಮ್ ಶೆಟ್ಟಿ ಕೋಡಿಂಬಾಡಿ , ಪುಷ್ಪರಾಜ್ ಶೆಟ್ಟಿ, ವಿಜಯ ಚೀಮುಳ್ಳು, ಮೊದಲಾದವರು ವಿವೇಕಾನಂದ ರವರನ್ನು ಸ್ವಾಗತಿಸಿದರು.