ಬಂಟ್ವಾಳ: ನೆರೆಮನೆಯವರ ಅಥವಾ ಇತರರ ಕಷ್ಟಗಳನ್ನು ನೋಡಿ ಏನಾದರೂ ಸಹಾಯ ಮಾಡಲು ಪ್ರಯತ್ನಿಸಬೇಕು. ನೋಡಿಯೂ ನೋಡದಂತೆ ನನಗೇಕೆ ಬೇಕು ಬೇಡದ ಕೆಲಸವೆಂದು ಸುಮ್ಮನಿರಬಾರದು. ಇತರರ ಕಷ್ಟವನ್ನು ತನ್ನದೇ ಕಷ್ಟವೆಂದು ಸ್ವೀಕರಿಸಿ ಸಾಧ್ಯವಾದ ಸಹಾಯವನ್ನು ಮಾಡಲು ಪ್ರಯತ್ನಿಸಬೇಕು. ಅದುವೇ ಬದುಕಿನ ಸಾರ್ಥಕತೆ ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ಹೇಳಿದರು.
ಬಂಟ್ವಾಳ ತಾಲೂಕಿನ ಇರಾ ಗ್ರಾಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸಹಾಯದಿಂದ ನಿರ್ಮಾಣ ಮಾಡಿದ ಮನೆಗೆ ಶ್ರೀಮತಿ ಸುಮತಿ ಜಯಶಂಕರ ನೋಂಡ ರವರಿಗೆ ಕೊನೆಯ ಕಂತು 50,000ರುಪಾಯಿಗಳ ಚೆಕ್ ಹಸ್ತಾಂತರಿಸಿ ಮಾತನಾಡುತ್ತಾ ಜಯಶಂಕರ ನೋಂಡರಿಗೆ ಜಾಗತಿಕ ಬಂಟರ ಸಂಘದ ಮೂಲಕ ಪ್ರತಿ ತಿಂಗಳು 5,000/ರೂಪಾಯಿಗಳನ್ನು ನೀಡುವುದಾಗಿ ತಿಳಿಸಿದ್ದೇ ಅಲ್ಲದೆ ಮನೆಗೆ ಪೈಂಟಿಂಗ್ ಮಾಡಿಸಲು,ಮಕ್ಕಳ ವಿದ್ಯಾಭ್ಯಾಸದ ಬಗ್ಗೆಯೂ ಸಹಕರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಮಾತನಾಡಿ, ನಮ್ಮ ಸಮುದಾಯದ ದುರ್ಬಲರ ಸಮಸ್ಯೆಗಳಿಗೆ ಸ್ಪಂದಿಸುವುದು ಜಾಗತಿಕ ಸಂಘದ ಧ್ಯೇಯವಾಗಿದೆ. ಇದನ್ನು ಐಕಳ ಹರೀಶ್ ಶೆಟ್ಟಿಯವರು ಸಮರ್ಥವಾಗಿ ಕಾರ್ಯರೂಪಕ್ಕೆ ತರುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ, ಕುಳಾಲು ಹಾಗೂ ವಿಟ್ಲಪಡ್ನೂರು ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ರವೀಶ್ ಶೆಟ್ಟಿ ಕಾರ್ಕಳ, ಗಣೇಶ್ ಶೆಟ್ಟಿ ಬಾರೆಬೆಟ್ಟು ಶುಭಾಶಯಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ವಲಯ ಬಂಟರ ಸಂಘದ ಕಾರ್ಯದರ್ಶಿಯವರಾದ ಶಶಿಧರ್ ರೈ ಕುಳಾಲು, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ವಿಜಯಾ ಬಿ.ಶೆಟ್ಟಿ ಸಾಲೆತ್ತೂರು, ಜಯಶಂಕರ ನೋಂಡ ರವರು ಉಪಸ್ಥಿತರಿದ್ದರು.
ಮುಂಜಾನೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರನ್ನು ಹಾಗೂ ಉಪಾಧ್ಯಕ್ಷರನ್ನು ಶ್ರೀ ಕ್ಷೇತ್ರ ಪಣೋಲಿಬೈಲಿನಲ್ಲಿ ಸ್ವಾಗತಿಸಿ ಸಾಲೆತ್ತೂರು ಮಾರ್ಗವಾಗಿ ಇರಾ ಗ್ರಾಮದ ಎರ್ಮಾಜೆಗೆ ಕರತರಲು ಸಂಘದ ಪದಾಧಿಕಾರಿಗಳಾದ ಅಮರೇಶ್ ಶೆಟ್ಟಿ ತಿರುವಾಜೆ, ಅರವಿಂದ ರೈ ಮೂರ್ಜೆಬೆಟ್ಟು,ಶ್ರೀ ಉದಯ ಕುಮಾರ್ ರೈ ಅಗರಿ,ಸದಾಶಿವ ಶೆಟ್ಟಿ ಕಾಡುಮಠ, ಬಾಲಕೃಷ್ಣ ಶೆಟ್ಟಿ ಸಾಲೆತ್ತೂರು, ಪವಿತ್ರ ಪೂಂಜ ಕೊಡಂಗೆ, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ನಾಗೇಶ್ ಶೆಟ್ಟಿ ಕೊಡಂಗಾಯಿ, ರೋಹಿತ್ ರೈ ಚೆಂಬರಡ್ಕ ಸಹಕರಿಸಿದರು. ಸಾಲೆತ್ತೂರು ವಲಯದ ಬಂಟರ ಸಂಘದ ಅಧ್ಯಕ್ಷರಾದ ದೇವಪ್ಪ ಶೇಖ ಪೀಲ್ಯಡ್ಕರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಶಶಿಧರ್ ರೈ ,ಕುಳಾಲು ವಂದನಾರ್ಪಣೆಯನ್ನು ಸಲ್ಲಿಸಿದರು. ಜಾಗತಿಕ ಬಂಟರ ಸಂಘಗಳ ಮಾಜಿ ಕೋಶಾಧಿಕಾರಿಗಳಾದ ಬಾಲಕೃಷ್ಣ ರೈ ಕೊಲ್ಲಾಡಿಯವರು ಕಾರ್ಯಕ್ರಮ ನಿರೂಪಿಸಿದರು. ಛಾಯಾಗ್ರಾಹಕರಾಗಿ ಕಿಶೋರ್ ಶೆಟ್ಟಿ(ಕಿಶು ಸ್ಟುಡಿಯೋ) ಸಾಲೆತ್ತೂರು ಸಹಕರಿಸಿದರು.