ಕಾರವಾರ: ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾಗಿರುವ ಉತ್ತರ ಕನ್ನಡದ ಮುರುಡೇಶ್ವರದ ಬೃಹತ್ ಈಶ್ವರ ಪ್ರತಿಮೆ ಚಿತ್ರ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇದು ಉಗ್ರ ಸಂಘಟನೆಯ ದಾಳಿಯ ಪಿತೂರಿ ಎಂಬ ಅನುಮಾನ ಕಾಡತೊಡಗಿದೆ.
ಉಗ್ರ ಸಂಘಟನೆ ‘ಐಸಿಸ್’ನ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಶಿವನ ವಿಗ್ರಹದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಪ್ರಕಟಿಸಲಾಗಿದ್ದು, ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ಮಾದ್ಯಮ ಸುದ್ದಿ ವಿಶ್ಲೇಷಕಾ ಅಂಶುಲ್ ಸಕ್ಸೇನಾ ಎಂಬುವವರು ಇದನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿ ಸರ್ಕಾರಗಳ ಗಮನ ಸೆಳೆಯಲು ಯತ್ನಿಸಿದ್ದಾರೆ. ‘ಐಸಿಸ್’ ಮುಖವಾಣಿ ಪತ್ರಿಕೆ ‘ದಿ ವಾಯ್ಸ್ ಆಫ್ ಹಿಂದ್’ನಲ್ಲಿ ಮುರುಡೇಶ್ವರದ ಶಿವನ ವಿಗ್ರಹವನ್ನು ಪ್ರಕಟಿಸಲಾಗಿದೆ.
ಅದರ ಮೇಲೆ ‘ಇದು ನಕಲಿ ದೇವರನ್ನು ಒಡೆಯುವ ಸಮಯ’ (Its time to Break False Gods) ಎಂಬ ವಾಕ್ಯವನ್ನು ಬರೆಯಲಾಗಿದೆ. ಶಿವನ ಪ್ರತಿಮೆಯನ್ನು ಅರ್ಧಕ್ಕೆ ಕತ್ತರಿಸಿ, ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಮಾದರಿಯ ಧ್ವಜ ಹಾರಾಡುತ್ತಿರುವಂತೆ ಚಿತ್ರಿಸಲಾಗಿದೆ. ಈ ಕುರಿತು ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ಪೋಸ್ಟ್ನಲ್ಲಿ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.