ಬೆಳ್ತಂಗಡಿ: “ಮಾರಿಗುಡಿಸ್ ” ಎಂಬ ಇನ್ಸ್ಟಾಗ್ರಾಮ್ ಪೇಜ್ ಹಾಗೂ ಇತರ ಸಾಮಾಜಿಕ ಜಾಲತಾಣಗಳಲ್ಲಿ ಅನ್ಯ ಧರ್ಮದ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿರುವ ವಿರುದ್ಧ ಮಂಗಳೂರಿನ ಯುವಕನೋರ್ವ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆ ಪೊಲೀಸರು ಬೆಳ್ತಂಗಡಿಯ ಯುವಕನೋರ್ವನನ್ನು ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಲು ಪ್ರಾರಂಭಿಸಿದ ಪೊಲೀಸರಿಗೆ ಸಿಮ್ ಕಾರ್ಡ್ ಹಾಗೂ ಮೊಬೈಲ್ ವಿಳಾಸ ಹೊಂದಿರುವ ವ್ಯಕ್ತಿ ದುಬೈನಲ್ಲಿ ಉದ್ಯೋಗದಲ್ಲಿರುವುದು ತಿಳಿದು ಬಂದಿದ್ದು,ಇದರ ಬೆನ್ನು ಹತ್ತಿದಾಗ ಸಿಮ್ ಹಾಗೂ ಮೊಬೈಲ್ ಫೋನ್ ಇನ್ನೊಬ್ಬ ಸಂಬಂಧಿ ಯುವಕ ಉಪಯೋಗಿಸುತ್ತಿರುವುದು ತಿಳಿಯಿತು.
ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಕುತ್ತೊಟ್ಟು ನಿವಾಸಿಯಾಗಿರುವ ಉಜಿರೆ ಬಸ್ ನಿಲ್ದಾಣದ ಬಳಿ ಇರುವ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿರುವ ಹಂಝಾಲ್ (19) ಆ ಸಿಮ್ ಕಾರ್ಡ್ ಅನ್ನು ಬಳಸುತ್ತಿದ್ದ ಎಂದು ತಿಳಿದು ಬಂದಿದೆ.
ಖಚಿತ ಮಾಹಿತಿ ಮೇರೆಗೆ ಉಜಿರೆಯಿಂದ ಮಹಮ್ಮದ್ ಹಂಝಾಲ್ ನನ್ನು ವಶಕ್ಕೆ ಪಡೆದುಕೊಂಡು ಮಂಗಳೂರು ಸೈಬರ್ ಕ್ರೈಂ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾನು ಮಾಡಿದ ಕೃತ್ಯವನ್ನು ಒಪ್ಪಿಕೊಂಡಿದ್ದು, ನಂತರ ಪೊಲೀಸರು ಬಂಧಿಸಿದ್ದಾರೆ.