ಬಂಟ್ವಾಳ: ಖ್ಯಾತ ಕಬಡ್ಡಿ ಆಟಗಾರ ಉದಯ ಚೌಟ ಅನಾರೋಗ್ಯದಿಂದಾಗಿ ಮೇ.21 ರಂದು ನಿಧನರಾದರು.
ದೇಶದ ಪ್ರಮುಖ ಕಬಡ್ಡಿ ಆಟಗಾರರಲ್ಲಿ ಒಬ್ಬರಾದ ಉದಯ ಚೌಟ ರವರು ಬಂಟ್ವಾಳ ತಾಲೂಕಿನ ಮಾಣಿಯ ಬದಿಗುಡ್ಡೆ ನಿವಾಸಿ.

2007ರ ದ್ವಿತೀಯ ವಿಶ್ವಕಪ್ ಕಬಡ್ಡಿ ಪಂದ್ಯಾಟದಲ್ಲಿ ಗೆಲುವು ಸಾಧಿಸಿರುವ ತಂಡದಲ್ಲಿ ‘ಅತ್ಯುತ್ತಮ ಆಟಗಾರ’ ಪ್ರಶಸ್ತಿಯನ್ನು ಪಡೆದಿದ್ದರು.
ಪ್ರಸಕ್ತ ಬ್ಯಾಂಕ್ ಆಫ್ ಬರೋಡದ ಸುರತ್ಕಲ್ ಕಚೇರಿಯಲ್ಲಿ ಉಪ ಪ್ರಬಂಧಕರಾಗಿರುವ ಉದಯ ಚೌಟ, ಕ್ರೀಡಾ ಕೋಟದಲ್ಲಿ 8 ತಿಂಗಳ ಕಾಲ ಏರ್ ಇಂಡಿಯಾ ಮತ್ತು 10 ತಿಂಗಳ ಕಾಲ ಕೆಪಿಟಿಸಿಎಲ್ ಉದ್ಯೋಗದಲ್ಲಿದ್ದರು.

ಮಾಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪುತ್ತೂರು ಸರಕಾರಿ ಕಾಲೇಜಿನಲ್ಲಿ ಪಿಯುಸಿ, ಪುತ್ತೂರು ಸಂತ ಫಿಲೋಮಿನ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಕ್ರೀಡಾಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊಂದಿದ್ದರು. ಪಿಯುಸಿಯಲ್ಲಿ ವಾಲಿಬಾಲ್ , ಕಬಡ್ಡಿಯಲ್ಲಿ ಆಸಕ್ತಿ ಹೊಂದಿದ್ದರು.
ವಿದ್ಯಾಭ್ಯಾಸ ಮಾಡುತ್ತಿದ್ದಾಗಲೇ ನಾಲ್ಕು ವರ್ಷ ಅಂತರ್ ಕಾಲೇಜು ಕಬಡ್ಡಿ ಪಂದ್ಯಾಟದಲ್ಲಿ ಜಯಗಳಿಸಿದ್ದ ಉದಯ್ ಚೌಟ ರವರು ಅಂತರ್ ವಿಶ್ವವಿದ್ಯಾನಿಲಯಕ್ಕೆ ಸೌತ್ರೆನ್ಗೆ ಮಂಗಳೂರು ವಿವಿಯನ್ನು ಮೂರು ವರ್ಷ ಪ್ರತಿನಿಧಿಸಿದ್ದರು. 1993 ರಲ್ಲಿ ಜ್ಯೂನಿಯರ್ ನ್ಯಾಷನಲ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಇವರು 2000 ದಿಂದ 2008ರವರೆಗೆ ರಾಷ್ಟ್ರೀಯ ತಂಡದಲ್ಲಿದ್ದರು. ಬ್ಯಾಂಕ್ ಒಲಿಂಪಿಯಾಡ್ ತಂಡದ ನಾಯಕನಾಗಿ, ಬ್ಯಾಂಕ್ ಸ್ಪೋರ್ಟ್ಸ್ ಬೋರ್ಡ್ ತಂಡದ ನಾಯಕನಾಗಿ ಕಾರ್ಯನಿರ್ವಹಿಸಿದ ಇವರು ಇದರಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ದ.ಕ ಜಿಲ್ಲೆಯ ಅಮೆಚ್ಯೂರ್ ಕಬಡ್ಡಿ ಅಸೋಸಿಯೇಶನ್ನ ಸಂಘಟನಾ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಏಕಲವ್ಯ ಪ್ರಶಸ್ತಿ ಪಡೆದ ಜಿಲ್ಲೆಯ ಪ್ರಥಮ ಕಬಡ್ಡಿ ಆಟಗಾರ:
2004ರಲ್ಲಿ ಭಾರತ-ಬಾಂಗ್ಲಾ ಟೆಸ್ಟ್ ಕಬಡ್ಡಿ ಪಂದ್ಯಾಟದಲ್ಲಿ 5 ಪಂದ್ಯಗಳನ್ನು ಜಯಿಸಿ ಚಿನ್ನದ ಪದಕವನ್ನು ಪಡೆದಿದ್ದರು. ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆಗೆ ಕರ್ನಾಟಕ ಸರಕಾರ ನೀಡುವ ಏಕಲವ್ಯ ಪ್ರಶಸ್ತಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರಥಮ ಬಾರಿಗೆ ಪಡೆದ ಹೆಗ್ಗಳಿಕೆ ಇವರದ್ದು. 20 ವರ್ಷಗಳ ಕಾಲ ಕಬಡ್ಡಿ ಜೀವನದಲ್ಲಿ ಅಖಿಲ ಭಾರತ ಮಟ್ಟದಲ್ಲಿ 100ಕ್ಕೂ ಅಧಿಕ, ರಾಜ್ಯಮಟ್ಟದಲ್ಲಿ 300 ಕ್ಕೂ ಅಧಿಕ ಪಂದ್ಯಾಟಗಳನ್ನು ಆಡಿದ್ದಾರೆ.
ಕ್ರೀಡಾ ಕ್ಷೇತ್ರದಲ್ಲಿ ಅಭೂತ ಪೂರ್ವ ಸಾಧನೆಗೈದ ಉದಯಚೌಟ ರವರ ಅಕಾಲಿಕ ಮರಣಕ್ಕೆ ಕುಟುಂಬಸ್ಥರು, ಊರವರು ಕಂಬನಿ ಮಿಡಿದಿದ್ದಾರೆ.