ತಿರುವನಂತಪುರಂ: ಬಾಲಕನೊಬ್ಬ ಸಾಮಾಜಿಕ ಜಾಲತಾಣದಲ್ಲಿನ ವೀಡಿಯೋವನ್ನು ನೋಡಿ ಪ್ರಭಾವಿತನಾಗಿ ಕೂದಲು ನೇರ ಮಾಡಲು ಸೀಮೆ ಎಣ್ಣೆ ಸುರಿದು ತಲೆಕೂದಲಿಗೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.
ಶಿವನಾರಾಯಣ್ (12) ಮೃತ ಬಾಲಕ. ಬಾಲಕ ಸೋಶಿಯಲ್ ಮೀಡಿಯಾದಲ್ಲಿ ವೀಡಿಯೋವನ್ನು ನೋಡಿ ತಾನು ಹಾಗೇ ಮಾಡಲು ಹೋಗಿ ಪ್ರಾಣವನ್ನು ಕಳೆದುಕೊಂಡಿದ್ದಾನೆ. ಈತ ಮೂಲತಃ ವೆಂಗನೂರಿನವನು ಎಂದು ತಿಳಿದು ಬಂದಿದೆ.
7ನೇ ತರಗತಿ ಓದುತ್ತಿದ್ದ ಶಿವನಾರಾಯಣ್ ತಲೆಕೂದಲಿಗೆ ಸೀಮೆ ಎಣ್ಣೆ ಹಾಕಿ ಬೆಂಕಿ ಹಚ್ಚಿಕೊಂಡು ಕೂದಲು ನೇರ ಮಾಡುವ ವೀಡಿಯೋವನ್ನು ನೋಡಿದ್ದಾನೆ. ತಾನೂ ಹಾಗೇ ಮಾಡಲು ಪ್ರಯತ್ನಿಸಿದ್ದಾನೆ. ಈ ವೇಳೆ ಬೆಂಕಿ ದೇಹಕ್ಕೆ ತಗುಲಿದೆ. ಮನೆಯಲ್ಲಿ ಅಜ್ಜಿ ಮಾತ್ರ ಇರುವುದರಿಂದ ಪ್ರಾಣ ರಕ್ಷಣೆ ಮಾಡಲು ಸಾಧ್ಯವಾಗಿಲ್ಲ. ನೆರೆಹೊರೆಯವರು ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಶಿವನಾರಾಯಣ್ ಪ್ರಾಣಬಿಟ್ಟಿದ್ದಾನೆ.