ಮಂಗಳೂರು : ಕುಡಿತವೇ ಹಾಗೇ ಅನೇಕ ಸಂಸಾರಗಳು ಕುಡಿತದಿಂದ ಹಾಳಾಗಿದ್ದರೆ ಅನೇಕ ಅಮಾಯಕ ಜೀವಗಳು ಕುಡುಕರಿಂದ ಬಲಿಯಾಗಿವೆ. ಇಂತಹುದೇ ಘಟನೆ ಮಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಸಂಭವಿಸಿದೆ. ಮಂಗಳೂರು ನಗರದ ಸರ್ಕಿಟ್ ಹೌಸ್ ಬಳಿ ರಸ್ತೆಯ ಬದಿಯಲ್ಲಿ ತನ್ನ ಪಾಡಿಗೆ ತಾನಾಗಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಯೋರ್ವನನ್ನು ಕುಡಿತದ ಅಮಲಿನಲ್ಲಿ ಡ್ರೈವ್ ಮಾಡುತ್ತಿದ್ದ ವಾಹನವೊಂದು ಬಲಿ ಪಡೆದುಕೊಂಡಿದೆ.
ಆರೋಪಿ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್ ಷಣ್ಮುಗಂ ಎಂದು ಗುರುತ್ತಿಸಲಾಗಿದ್ದು ಪೊಲೀಸರು ಬಂಧಿಸಿದ್ದಾರೆ. ಮೃತ ದುರ್ದೈವಿಯನ್ನು ಬಿ.ಎಸ್.ಎನ್.ಎಲ್ ನ ನಿವೃತ್ತ ಉದ್ಯೋಗಿ ಎ.ಆನಂದ ಎಂದು ಗುರುತ್ತಿಸಲಾಗಿದೆ. ಕಾರ್ಯ ನಿಮಿತ್ತ ಉಡುಪಿಗೆ ಹೋಗಿದ್ದ ಆನಂದ ಅವರು ಕೆಲಸ ಮುಗಿಸಿ ಬಸ್ಸಲ್ಲಿ ಬಂದು ಸರ್ಕಿಟ್ ಹೌಸ್ ಬಳಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅತೀ ವೇಗದಿಂದ ಬಂದ ಷಣ್ಮುಗಂ ಅವರ ಕಾರು ಆನಂದ ಅವರನ್ನು ಬಲಿ ತೆಗೆದುಕೊಂಡಿದ್ದು ಈ ಭೀಕರ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.
ಪ್ರಕರಣದಿಂದ ತಪ್ಪಿಸಿಕೊಳ್ಳಲು ಚಾಲಕ ನನ್ನ ತಮ್ಮ ಅಂತಾ ಹೇಳಿ ಪೊಲೀಸರ ದಿಕ್ಕು ತಪ್ಪಿಸೋ ಯತ್ನ ಕೂಡ ಮಾಡಿದ್ದು ಆದರೆ ಸಾಕ್ಷಾಧಾರ ಕಲೆ ಹಾಕಿ ದೂರು ದಾಖಲಿಸಿದ ಮಂಗಳೂರು ಪೂರ್ವ ಸಂಚಾರಿ ಪೊಲೀಸರು ಷಣ್ಮುಗಂ ಮೇಲೆ ಕೊಲೆ ಆರೋಪದ ಪ್ರಕರಣವನ್ನು ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತ ಆನಂದ ಅವರು ಮೂಲತ ಚಿಕ್ಕಮಗಳೂರಿನವರಾಗಿದ್ದು ಪತ್ನಿ ಲಲಿತರೊಂದಿಗೆ ಕದ್ರಿ ಬಳಿ ವಾಸವಾಗಿದ್ದರು ಎಂದು ತಿಳಿದು ಬಂದಿದ್ದು, ಕುಡಿತದ ಮತ್ತು ಬೇಜಾಬ್ದಾರಿಯ ವಾಹನ ಚಾಲನೆಯಿಂದ ಅಮಾಯಕನಾದ ಆನಂದ ಅವರು ಪ್ರಾಣ ಕಳಕೊಂಡಿದ್ದು, ಪತಿಯ ಅಕಾಲಿಕ ಅಗಲಿಕೆಯಿಂದ ಲಲಿತಾ ಅವರು ಅನಾಥೆಯಾಗಿದ್ದಾರೆ.