ಮಂಗಳೂರು: ಫಾಜಿಲ್ ಹತ್ಯೆ ಪ್ರಕರಣದಲ್ಲಿ ಬಂಧನವಾಗಿದ್ದ ಅಜಿತ್ ಡಿಸೋಜಾ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು 6 ಮಂದಿ ಆರೋಪಿಗಳನ್ನು ಇಂದು ಬೆಳಗ್ಗೆ ಬಂಧನ ಮಾಡಿದ್ದಾರೆ. ಸಂಜೆ ವೇಳೆಗೆ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿ, 14 ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲು ಮನವಿ ಮಾಡೋದಾಗಿ ಕಮಿಷನರ್ ಶಶಿ ಕುಮಾರ್ ಮಾಹಿತಿ ನೀಡಿದ್ದಾರೆ. ಈ ನಡುವೆ ಆರೋಪಿಗಳ ಬಂಧನ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಕಮಿಷನರ್, 6 ಮಂದಿಯ ಹಿನ್ನೆಲೆಯನ್ನು ಬಿಚ್ಚಿಟ್ಟಿದ್ದಾರೆ.
ಕೊಲೆ ಪ್ರಕರಣದಲ್ಲಿ ಸದ್ಯ ಸುಹಾಸ್ ಶೆಟ್ಟಿ (29), ಮೋಹನ್ (26), ಗಿರಿಧರ್ (23), ಅಭಿಷೇಕ್ (21), ಧೀಕ್ಷಿತ್ (21), ಶ್ರೀನಿವಾಸ್ (23) ಎಂಬ ಆರೋಪಿಗಳನ್ನು ಪೊಲೀಸರು ಬಂಧನ ಮಾಡಿದ್ದು, ಬಂಧಿತರೆಲ್ಲರ ವಿರುದ್ಧ ಅನೇಕ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ರೌಡಿ ಶೀಟರ್ಗಳನ್ನು ತೆರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಆರೋಪಿಗಳ ಹಿನ್ನಲೆ:
ಸುಹಾಸ್ ಶೆಟ್ಟಿ – 29 ವರ್ಷದ ಆರೋಪಿ ಸುಹಾಸ್ ಮಂಗಳೂರಿನ ಬಜ್ಪೆಯ ಕೊಂಚಾರುವಿನ ಬಜ್ಪೆ ಚೆಕ್ ಪೋಸ್ಟ್ನಲ್ಲಿ ವಾಸಿಸುತ್ತಿದ್ದು, ಆತನ ಮೇಲೆ ಗಲಾಟೆ, ಹಲ್ಲೆ, ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಬಜ್ಪೆಯಲ್ಲಿ 4, ಬೆಳ್ತಂಗಡಿ ಯಲ್ಲಿ ಒಂದು ಪ್ರಕರಣ ದಾಖಲಾಗಿದೆ.
ಮೋಹನ್ ಅಲಿಯಾಸ್ ಮೋಹನ್ ಸಿಂಗ್ – 26 ವರ್ಷದ ಆರೋಪಿ ಮೋಹನ್ ಮಂಗಳೂರಿನ ಕುಳಾಯಿಯ ಕಾವಿನ ಕಲ್ಲು 2ನೇ ಅಡ್ಡ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ. ಆತನ ವಿರುದ್ಧ ಹಲ್ಲೆ, ಗಲಾಟೆ, ಬೆದರಿಕೆ ಆರೋಪಗಳ ಹಿನ್ನೆಲೆಯಲ್ಲಿ ಸುರತ್ಕಲ್ ಹಾಗೂ ಕಾವುರು ಠಾಣೆಯಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ಗಿರಿಧರ– 23 ವರ್ಷದ ಆರೋಪಿ ಗಿರಿಧರ ಮಂಗಳೂರಿನ ಸುರತ್ಕಲ್ನ ವಿದ್ಯಾನಗರ ಕುಳಾಯಿ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಗಲಾಟೆ, ಬೆದರಿಕೆ ಸಂಬಂಧ 2 ಪ್ರಕರಣಗಳು ದಾಖಲಾಗಿದೆ.
ಅಭಿಷೇಕ್– 21 ವರ್ಷ ವರ್ಷದ ಆರೋಪಿ ಅಭಿಷೇಕ್ ಮಂಗಳೂರಿನ ಸುರತ್ಕಲ್ನ ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಹಲ್ಲೆ, ಗಲಾಟೆ, ಬೆದರಿಕೆ ಸಂಬಂಧ 2 ಪ್ರಕರಣಗಳು ದಾಖಲಾಗಿದೆ.
ಶ್ರೀನಿವಾಸ-23 ವರ್ಷದ ಆರೋಪಿ ಶ್ರೀನಿವಾಸ ಮಂಗಳೂರಿನ ಸುರತ್ಕಲ್ನ ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ 3, ಉರ್ವ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ ದಾಖಲಾಗಿದೆ.
ದೀಕ್ಷಿತ್– 21 ವರ್ಷದ ಆರೋಪಿ ದೀಕ್ಷಿತ್ ಮಂಗಳೂರಿನ ಸುರತ್ಕಲ್ನ ಕಾವಳ 2ನೇ ಬ್ಲಾಕ್ ನಿವಾಸಿಯಾಗಿದ್ದು, ಈತನ ವಿರುದ್ಧ ಸುರತ್ಕಲ್, ಮಂಪೂರ್ವ, ಕಾವೂರು ಪೊಲೀಸ್ ಠಾಣೆಗಳಲ್ಲಿ ತಲಾ ಒಂದು ಪ್ರಕರಣ ದಾಖಲಾಗಿದೆ.
ತಂಡಗಳಾಗಿ ಕಾರ್ಯಚರಣೆ:ಡಿಸಿಪಿ ಅಂಶು ಕುಮಾರ್ ನೇತೃತ್ವದಲ್ಲಿ ಕ್ರೈಂ ಡಿಸಿಪಿ ದಿನೇಶ್ ಕುಮಾರ್, ನಾರ್ತ್ ಎಸಿಪಿ ಮಹೇಶ್ ಕುಮಾರ್ ಅವರ ಉಪವಿಭಾಗದ ಅಧಿಕಾರಿಗಳು, ಸಿಸಿಬಿ ಯ ಮಹೇಶ್ ಪ್ರಸಾದ್ ಮತ್ತು ಸಿಬ್ಬಂದಿಗಳು ನಿರಂತರ ಹಲವು ತಂಡಗಳಾಗಿ ಕಾರ್ಯಚರಣೆ ನಡೆಸಲಾಗಿ ಆರೋಪಿಗಳನ್ನು ಬಂಧಿಸಲಾಗಿದೆ.

ಹತ್ಯೆ ಸಂಚು ರೂಪಿಸಿದ್ದ ಸುಹಾಸ್ ಶೆಟ್ಟಿ : ಈ ತಂಡದ ಆರೋಪಿಗಳು ಒಬ್ಬರಿಗೊಬ್ಬರು ಪರಿಚಯಸ್ಥರಲ್ಲ, ಕೃತ್ಯಕ್ಕೆ ಸುಹಾಸ್ ಶೆಟ್ಟಿ ಮೊದಲು ಆರೋಪಿ ಅಭಿಷೇಕ್ ಜೊತೆ ಸೇರಿ ಜುಲೈ 26 ರಂದು ಯೋಜನೆ ರೂಪಿಸಿದ್ದು ಒಬ್ಬೊಬ್ಬರಾಗಿ ಸೇರಿಕೊಂಡು ತಂಡವಾಗಿ ಕೆಲಸ ಮಾಡಿದ್ದಾರೆ. ಯಾರನ್ನಾದರೂ ಹೊಡೆಯಬೇಕು ಎಂದು ಯೋಜಿಸಿ, ಹತ್ಯೆಗಾಗಿ ಮೊದಲು 6-7 ಮಂದಿಯನ್ನು ಟಾರ್ಗೆಟ್ ಮಾಡಿ ಅಂತಿಮವಾಗಿ ಫಾಝಿಲ್ ನನ್ನು ಗುರಿಯಾಗಿಸಿದ್ದಾರೆ. 27 ನೇ ತಾರೀಕಿಗೆ ಸುಹಾಸ್ ಶೆಟ್ಟಿ ಸುರತ್ಕಲ್ ಹೋಟೆಲ್ ಗೆ ಹೋಗಿ ಗಿರಿಧರ್ ನನ್ನು ಅಲ್ಲಿಗೆ ಕರಿಸಿಕೊಳ್ಳುತ್ತಾರೆ. ಕಾರ್ ಬೇಕು ವೆಪನ್ ನನ್ನ ಬಳಿ ಇದೆ ಸ್ವಲ್ಪ ಹುಡುಗರು ಬೇಕು ಅಂತ ಚರ್ಚೆ ಮಾಡ್ತಾರೆ.ಅಲ್ಲಿಗೆ ಮೋಹನ್ ಕೂಡ ಇವರ ಜೊತೆ ಸೇರಿಕೊಳ್ಳುತ್ತಾನೆ. ನಂತರ ಮೋಹನ್ ತನ್ನ ಪರಿಚಯದ ಅಜಿತ್ ಕ್ರಾಸ್ತಾ ಬಳಿ ಗಿರಿಧರ್ ಜೊತೆ ಬಂದು ಕಾರ್ ಪಡೆಯುತ್ತಾರೆ. ಈ ವೇಳೆ ಹೋಟೆಲೊಂದರಲ್ಲಿ ಚರ್ಚೆ ನಡೆಸಿದ್ದು ಆರೋಪಿ ಮೋಹನ್ ತನ್ನ ಮತ್ತಿಬ್ಬರು ಸ್ನೇಹಿತರಿಗೆ ಯೋಜನೆಗೆ ಸೇರಲು ಕರೆ ಮಾಡಿ ಆಹ್ವಾನ ನೀಡಿದ್ದಾನೆ.
ಕಾರಿಗೆ ಬಾಡಿಗೆ ನಿಗದಿ: ಆರೋಪಿ ಮೋಹನ್ ಜು.27 ರಂದು ತಮ್ಮ ಪರಿಚಯಸ್ಥ ಅಜಿತ್ ಕ್ರಾಸ್ತಾ ಎಂಬಾತನ ಬಳಿ, “ಮಹತ್ವದ ಕೆಲಸವೊಂದಿದೆ” ಎಂದು 15000 ರೂ ಬಾಡಿಗೆ ನಿಗದಿ ಮಾಡಿ ಒಂದು ಸಾವಿರ ಅಡ್ವಾನ್ಸ್ ನೀಡಿ ಕಾರು ಪಡೆದು ಕೃತ್ಯಕ್ಕೆ ಬಳಸಿಕೊಂಡಿದ್ದಾರೆ. ಹೀಗಾಗಿ ಅಜಿತ್ ಕ್ರಾಸ್ತಾಗೂ ಘಟನೆಯ ಬಗ್ಗೆ ಅಸ್ಪಷ್ಟವಾದ ಮಾಹಿತಿ ಇತ್ತು.

ಹತ್ಯೆಗೂ ಮುನ್ನ ದೇವಾಲಯ ಭೇಟಿ :ಜು.27 ರಂದು ಸುಹಾಸ್ ಶೆಟ್ಟಿ ಕಾವೂರಿನಲ್ಲಿ ಸ್ನೇಹಿತರ ಮನೆಯಲ್ಲಿ ತಂಗಿದ್ದು, ಜುಲೈ 28 ರಂದು ಮುಂಜಾನೆ ಕಾರಿನಲ್ಲಿ ಕಾರಿಂಜೇಶ್ವರ ದೇವಸ್ಥಾನಕ್ಕೆ ತೆರಳಿದ್ದಾನೆ. ಬಳಿಕ ಸುಹಾಸ್ ಶೆಟ್ಟಿ ಸೇರಿದಂತೆ ಪ್ರಕರಣದ ಇತರ ಕೆಲವು ಆರೋಪಿಗಳ ಕೋರ್ಟ್ ಇರುವ ಕಾರಣ ಕೋರ್ಟ್ ಗೆ ಬರುತ್ತಾರೆ. ಕೋರ್ಟ್ ಗೆ ಹಾಜರಾದ ಬಳಿಕ ಸುಹಾಸ್ ಶೆಟ್ಟಿ ,ಅಭಿಷೇಕ್ , ಶ್ರೀನಿವಾಸ್ ಚರ್ಚೆ ನಡೆಸಿ ಟಾರ್ಗೆಟ್ ಗುರುತಿಸಿ ಮಂಕಿ ಕ್ಯಾಪ್ ಬೇಕು ಎಂದು ಮಂಕಿ ಕ್ಯಾಪ್ ಅರೇಂಜ್ ಮಾಡ್ತಾರೆ. ಬಳಿಕ ಎಲ್ಲರೂ ಕಿನ್ನಿಗೋಳಿ ಬಳಿಯ ಬಾರಿನಲ್ಲಿ ಊಟ ಮಾಡಿ ಫಾಸಿಲ್ ಹತ್ಯೆಗೆ ಹೊರಡುತ್ತಾರೆ.
ಯೋಜಿತ ಸಂಚು:ಫಾಝಿಲ್ ಹತ್ಯೆಯಲ್ಲಿ ಪ್ರೀತಿ – ಪ್ರೇಮ, ಆಂತರಿಕ ಘರ್ಷಣೆ, ರಾಂಗ್ ಟಾರ್ಗೆಟ್ ಎಂಬಿತ್ಯಾದಿ ವಿಚಾರವಾಗಿ ಗಾಳಿ ಸುದ್ದಿ ಹಬ್ಬಿದ್ದು, ಇದೆಲ್ಲವನ್ನೂ ತಳ್ಳಿ ಹಾಕಿದ ಪೊಲೀಸ್ ಆಯುಕ್ತರು,
ಹಂತಕರ ಅಂತಿಮ ಟಾರ್ಗೆಟ್ ಫಾಝಿಲ್ ಆಗಿದ್ದು, ಆತನ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.ಸುರತ್ಕಲ್ ನಲ್ಲಿ ಸಂಜೆಗತ್ತಲು ಆವರಿಸುತ್ತಿದ್ದಂತೆ ಚಲನವಲವನ್ನು ಫಾಲೋ ಮಾಡಿ ಹಂತಕರು ಏಕಾಏಕಿ ಮುಗಿಬಿದ್ದಿದ್ದಾರೆ. ಸುಹಾಸ್, ಮೋಹನ್, ಅಭಿಷೇಕ್ ಹಲ್ಲೆ ಮಾಡಿದ್ದು, ಈ ಪೈಕಿ ಗಿರಿಧರ್ ಡೈವಿಂಗ್ ಸೀಟಿನಲ್ಲಿದ್ದ. ದೀಕ್ಷಿತ್ ಕಾರಿನಲ್ಲಿದ್ದ.ಶ್ರೀನಿವಾಸ್ ಕವರಿಂಗ್ ಮಾಡುತ್ತಿದ್ದ.ಹತ್ಯೆಯ ನಂತರ 6 ಆರೋಪಿಗಳು ಪಲಿಮಾರು ಕಡೆಗೆ ಪರಾರಿಯಾಗಿದ್ದಾರೆ.ಬಳಿಕ ಕಾರನ್ನು ಕಾರ್ಕಳದ ಇನ್ನಾ ಗ್ರಾಮದಲ್ಲಿ ಬಿಟ್ಟು ಅಲ್ಲಿಂದ ಶ್ರೀನಿವಾಸ್ ತನ್ನ ಸ್ನೇಹಿತನಿಗೆ ಕರೆ ಮಾಡಿ ಬೇರೆ ಕಾರ್ ತರಿಸಿ ಅಲ್ಲಿಂದ ಬೇರೆ ಬೇರೆ ಕಡೆ ಚಲಿಸಲು ಯತ್ನಿಸಿದರು ಅದು ವಿಫಲವಾಗುತ್ತದೆ.ಬಳಿಕ ಇಂದು ಬೆಳಿಗ್ಗೆ ಇನ್ನರ್ ರೋಡ್ ಬಳಸಿ ಮೂಡುಬಿದ್ರೆ ಕಾರ್ಕಳ ರಸ್ತೆ ಮೂಲಕ ಉದ್ಯಾವರ ಬಳಿ ತಲುಪಿದಾಗ ಬೆಳಗ್ಗೆ 5.30 ಗೆ ಸಿಸಿಬಿ ಹಾಗೂ ನಾರ್ತ್ ಎಸಿಪಿ ಅವರ ತಂಡಕ್ಕೆ ಸಿಕ್ಕಿ ಬಿದ್ದಿದ್ದಾರೆ.

14 ದಿನಗಳ ಕಸ್ಟಡಿಗೆ ಕೋರಿದ ಪೊಲೀಸರು:ಫಾಝಿಲ್ನನ್ನು ಹತ್ಯೆಗೈದ ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 14 ದಿನಗಳ ಪೊಲೀಸ್ ಕಸ್ಟಡಿಗೆ ಕೋರಲಾಗಿದೆ. ಮುಂದೆ ಪೊಲೀಸ್ ಕಸ್ಟಡಿಗೆ ದೊರೆತ ಬಳಿಕ ಆರೋಪಿಗಳ ವಿಚಾರಣೆಯ ನಂತರ ಫಾಝಿಲ್ನನ್ನು ಏಕೆ ಟಾರ್ಗೆಟ್ ಮಾಡಲಾಗಿದೆ ಆರೋಪಿಗಳು ಯಾರ ಜೊತೆ ಮತ್ತು ಯಾವ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು ಎಂಬುದು ತಿಳಿದು ಬರಲಿದೆ ಎಂದು ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
