ಸುಳ್ಯ: ತಲ್ವಾರ್ ಹಿಡಿದು ಊರಿಡೀ ಸುತ್ತಿ ಭಯದ ವಾತಾವರಣ ನಿರ್ಮಾಣ ಮಾಡಿದ್ದ ಸುಳ್ಯದ ಕನಕಮಜಲಿನ ಸಂದೀಪ್ ಎಂಬಾತನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲೆಯಲ್ಲಿ ಸೂಕ್ಷ್ಮ ವಾತಾವರಣ ಇದ್ದ ಹೊರತಾಗಿಯೂ ಕ್ಷುಲ್ಲಕ ಕಾರಣಕ್ಕೆ ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ತಿರುಗಾಟ ನಡೆಸಿ ಈತ ಹುಚ್ಚಾಟ ಪ್ರದರ್ಶಿಸಿದ್ದ.
ಇದರಿಂದ ಸ್ಥಳೀಯರಲ್ಲಿ ಒಂದು ರೀತಿಯ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು. ಈತನ ಅತಿರೇಕದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನು ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸುಳ್ಯ ಸಬ್ ಇನ್ಸ್ಪೆಕ್ಟರ್ ದಿಲೀಪ್ ಜಿ.ಆರ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ಕಳೆದ ಎಂಟು ತಿಂಗಳಿನಿಂದ ಯುವಕ ಕುಡಿಯುವುದನ್ನು ಬಿಟ್ಟಿದ್ದ. ಇದ್ದಕ್ಕಿದ್ದಂತೆ ಘಟನೆಯಾದ ದಿನ ಕುಡಿದಿದ್ದಾನೆ. ಆದರಿಂದ ನಿಯಂತ್ರಣ ಕಳೆದುಕೊಂಡು ತಲ್ವಾರ್ ಹಿಡಿದುಕೊಂಡು ರಸ್ತೆಯಲ್ಲಿ ಓಡಾಡಿದ್ದಾನೆ. ಆದರೆ ಯಾರಿಗೂ ಸಮಸ್ಯೆ ಮಾಡುವ ಉದ್ದೇಶ ಆತ ಹೊಂದಿರಲಿಲ್ಲ. ಕುಡಿತ ಮತ್ತಿನಲ್ಲಿ ಸುಮ್ಮನೆ ಮನೆಯ ಕಡೆಗೆ ತಲ್ವಾರ್ ಹಿಡಿದುಕೊಂಡು ಹೋಗುತ್ತಿದ್ದ’ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ. ಆತನನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದೇವೆ ಎಂದಿದ್ದಾರೆ.