ಮೂಡುಬಿದಿರೆ: ತೆಂಕಮಿಜಾರು ಗ್ರಾ.ಪಂ. ವ್ಯಾಪ್ತಿಯ ಬಡಗ ಮಿಜಾರು ಗ್ರಾಮದ ಬೇರಿಂಜೆಯ ಮನೆಯೊಂದಕ್ಕೆ ಇಬ್ಬರು ಮುಸುಕುಧಾರಿಗಳು ನುಗ್ಗಿ ತಲವಾರು ಝಳಪಿಸಿ ಮಹಿಳೆಯ ಕತ್ತಿನಲ್ಲಿದ್ದ ಸುಮಾರು 5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ದರೋಡೆ ಮಾಡಿಕೊಂಡು ಪರಾರಿಯಾದ ಘಟನೆ ನಡೆದಿದೆ.
ಅಂಗನವಾಡಿ ಕೇಂದ್ರದಲ್ಲಿ ಸಹಾಯಕಿಯಾಗಿರುವ ಕಮಲಾ ಶೆಟ್ಟಿ ದರೋಡೆಗೊಳಗಾದ ಮಹಿಳೆ.
ಪತಿ ಕಳೆದ ವರ್ಷ ನಿಧನ ಹೊಂದಿದ್ದು, ಅದಕ್ಕೂ ಮುನ್ನ ಅವರ ಇಬ್ಬರು ಗಂಡು ಮಕ್ಕಳು ಮೃತಪಟ್ಟಿದ್ದರು. ಹೀಗೆ ಮನೆಯಲ್ಲಿ ಒಂಟಿಯಾಗಿದ್ದುದರಿಂದ ರಾತ್ರಿ ಮಲಗಲು ಪರಿಚಯಸ್ಥ ಮಹಿಳೆಯೊಬ್ಬರು ಅವರ ಮನೆಗೆ ಬರುತ್ತಿದ್ದರು.
ರಾತ್ರಿ ಸುಮಾರು ಹನ್ನೊಂದು ಗಂಟೆಗೆ ಮನೆ ಹೊರಗಡೆ ಮಾತನಾಡುತ್ತಿದ್ದ ಅವರಿಬ್ಬರು ಅನಂತರ ಮಲಗಲು ಮನೆ ಒಳಗಡೆ ಹೋಗುತ್ತಿದ್ದಂತೆ ಮುಸುಕುಧಾರಿಗಳಿಬ್ಬರು ಮಾರಕಾಯುಧದೊಂದಿಗೆ ಮನೆಗೆ ನುಗ್ಗಿ ಕಮಲಾ ಅವರ ಕತ್ತು ಒತ್ತಿ ಹಿಡಿದು ಕರಿಮಣಿ ಸರವನ್ನು ಎಳೆದೊಯ್ದಿದ್ದಾರೆ. ಪ್ರತಿರೋಧ ಒಡ್ಡಿದ ಮಹಿಳೆ ಬೊಬ್ಬೆ ಹೊಡೆದಾಗ ಹತ್ತಿರದಲ್ಲಿ ಗಣೇಶೋತ್ಸವ ಸಿದ್ಧತೆಯಲ್ಲಿದ್ದ ಯುವಕರು ಸ್ಥಳಕ್ಕೆ ಧಾವಿಸಿ ಬಂದು ಸುತ್ತಮುತ್ತ ಹುಡುಕಾಡಿದರೂ, ಆರೋಪಿಗಳ ಸುಳಿವು ಸಿಗಲಿಲ್ಲ. ಕುತ್ತಿಗೆ ಭಾಗದಲ್ಲಿ ಆದ ಗಾಯ ಮತ್ತು ಕರಿಮಣಿ ಸರ ಹೋದದ್ದರಿಂದ ಆತಂಕಗೊಂಡ ಕಮಲಾ ಅವರು ಅಸ್ವಸ್ಥರಾಗಿದ್ದು, ಮಾತನಾಡಲಾಗದ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.