ಪುತ್ತೂರು: ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ಚುನಾವಣೆಯು ಹತ್ತಿರ ಬರುವ ಈ ಸಂದರ್ಭದಲ್ಲಿ ಪಕ್ಷ ಸಂಘಟನೆಗೆ ಇನ್ನಷ್ಟು ಒತ್ತು ಕೊಡುವುದು. ಮತದಾರರ ಪಟ್ಟಿಗೆ ಹೆಸರು ಸೇರ್ಪಡಿಸುವ ಬಗ್ಗೆ ಹಾಗೂ ಇನ್ನು ಹಲವಾರು ವಿಷಯಗಳ ಬಗ್ಗೆ ಪ್ರಸ್ತಾಪಿಸಿದ ಎಂ ಬಿ ವಿಶ್ವನಾಥ ರೈ ಯವರು ಪುತ್ತೂರಲ್ಲಿ ಕಾಂಗ್ರೆಸ್ ಶಾಸಕರು ಆಯ್ಕೆಯಾಗಬೇಕಾದರೆ ಕಾರ್ಯಕರ್ತರು ಈಗಲೇ ಶ್ರಮವಹಿಸಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಮಾತನಾಡಿ, ಮುಂದಿನ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಕಾರ್ಯಕರ್ತರ ಕೆಲಸ ಬಹು ಪ್ರಾಮುಖ್ಯವಾಗಿದೆ, ರಾಜ್ಯದ ಬಿಜೆಪಿ ಸರಕಾರ ಇಂದಿರಾ ಕ್ಯಾಂಟೀನ್ ಅನ್ನು ನಿಧಾನವಾಗಿ ಮುಚ್ಚಿಸುವ ಷಡ್ಯಂತ್ರ ಮಾಡಿ ಬಡವರ ಹೊಟ್ಟೆಗೆ ಹೊಡೆಯುವ ಹುನ್ನಾರದಲ್ಲಿದೆ. ಬಿಜೆಪಿಯ ದುರಾಡಳಿತದಿಂದ ಜನ ಸಾಮಾನ್ಯರ ಬದುಕು ಸಂಕಷ್ಟಕ್ಕೆ ಈಡಾಗಿದೆ. ಇಂತಹ ಜನ ವಿರೋಧಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವ ಸಮಯ ಬಂದಿದೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಎಚ್ ಮಹಮ್ಮದ್ ಅಲಿಯವರು ಮಾತನಾಡಿ, ನಗರ ವ್ಯಾಪ್ತಿಯ 31 ವಾರ್ಡ್ ಗಳನ್ನು ವಿಂಗಡಿಸಿ ಐದು ವಲಯಗಳನ್ನು ರಚಿಸಿ ಪ್ರತಿಯೊಂದು ವಲಯಗಳಿಗೆ ಸಮರ್ಥ ನಾಯಕತ್ವದ ಉಸ್ತುವಾರಿ ತಂಡ ರಚಿಸಿ ಅವರಿಗೆ ಪಕ್ಷ ಸಂಘಟನೆಯ ಉಸ್ತುವಾರಿಯನ್ನು ನೀಡಲಾಗಿದೆ, ಈಗಾಗಲೇ ವಿಧಾನಸಭಾ ಅಭ್ಯರ್ಥಿತನಕ್ಕೆ 13 ಜನ ಅರ್ಜಿ ಸಲ್ಲಿಸಿದ್ದಾರೆ, ಈ ಕುರಿತು ಕಾರ್ಯಕರ್ತರಲ್ಲಿ ಗೊಂದಲ ಬೇಡ, ಅಭ್ಯರ್ಥಿ ಆಕಾಂಕ್ಷಿಗಳು ಪಕ್ಷದ ಸಂಘಟನೆಗೆ ಪೂರಕವಾಗಿ ಕೆಲಸ ಮಾಡಬೇಕು, ರಾಜ್ಯದ ಯಾವುದೇ ಕ್ಷೇತ್ರಕ್ಕೂ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆದಿಲ್ಲ, ಪುತ್ತೂರಿನ ಅಭ್ಯರ್ಥಿತನದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರುವ ಪೋಸ್ಟ್ ಗಳ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದರು.

ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಹಾಗೂ ನಗರ ಸಭಾ ಸದಸ್ಯರಾದ ರಿಯಾಜ್ ಪರ್ಲಡ್ಕ ಮಾತನಾಡಿ, ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳಾಗಿ 13 ಜನ ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯ ಕಟ್ಟಡ ನಿಧಿಗೆ ಪ್ರತಿಯೊಬ್ಬರು ರೂ 2 ಲಕ್ಷ ಹಣ ಪಾವತಿಸಿದ್ದು, ಇದರಂತೆ ಪುತ್ತೂರು ಕಾಂಗ್ರೆಸ್ ಕಚೇರಿ ನಮ್ಮ ಹೆಸರಲ್ಲಿ ಆಗಬೇಕಾದರೆ, ಕಟ್ಟಡ ಮಾಲೀಕರಿಗೆ ಹಣ ನೀಡಲು ಪ್ರತಿಯೊಬ್ಬ ಅಕಾಂಕ್ಷಿಗಳಿಂದ ಬ್ಲಾಕ್ ಕಾಂಗ್ರೆಸ್ ಕಟ್ಟಡ ನಿಧಿಗೆ ಹಣ ಸಂಗ್ರಹಿಸಬೇಕೆಂದು ಸಲಹೆ ನೀಡಿದರು ಇದಕ್ಕೆ ಸಭೆಯಲ್ಲಿದ್ದ ಸರ್ವ ಕಾರ್ಯಕರ್ತರು ಧ್ವನಿಗೂಡಿಸಿದರು. ಸಭೆಯಲ್ಲಿದ್ದ ಕಾರ್ಯಕರ್ತರ ಒತ್ತಾಸೆಯಂತೆ ಪ್ರತಿಯೊಬ್ಬ ಅಭ್ಯರ್ಥಿ ಆಕಾಂಕ್ಷಿಗಳಿಂದ ತಲಾ ರೂ. ಒಂದು ಲಕ್ಷ ದಂತೆ ದೇಣಿಗೆ ಪಡೆಯುವುದೆಂದು ತೀರ್ಮಾನಿಸಲಾಯಿತು. ಈ ಬಗ್ಗೆ ಮಾತನಾಡಿದ ಮಹಮ್ಮದ್ ಅಲಿಯವರು ಕಟ್ಟಡ ನಿಧಿಗೆ ಅಭ್ಯರ್ಥಿ ಆಕಾಂಕ್ಷಿಗಳಾದ ಎಂ ಬಿ ವಿಶ್ವನಾಥ ರೈ ಹಾಗೂ ದಿವ್ಯಪ್ರಭಾ ಚಿಲ್ತಡ್ಕ ತಲಾ 1 ಲಕ್ಷ ನೀಡುವ ವಾಗ್ದಾನ ಮಾಡಿದ್ದಾರೆ ಎಂದು ಹೇಳಿದರು.
ಪಕ್ಷದ ಜಿಲ್ಲಾ ವಕ್ತಾರ ಮಹಮ್ಮದ್ ಬಡಗಂನ್ನೂರು ಹಾಗೂ ಕೆಪಿಸಿಸಿ ಸದಸ್ಯ ಪ್ರಸಾದ್ ಕೌಶಲ್ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಳ ರಾಮಚಂದ್ರ ಕಾರ್ಯಕ್ರಮದ ನಿರ್ವಹಣೆ ಮಾಡಿದರು, ಕೆಪಿಸಿಸಿ ಸಂಯೋಜಕ ಎನ್ ಚಂದ್ರಹಾಸ ಶೆಟ್ಟಿ, ಬ್ಲಾಕ್ ನ ಪದಾಧಿಕಾರಿಗಳು, ವಲಯ ಕಾಂಗ್ರೆಸ್ ಪದಾಧಿಕಾರಿಗಳು, ಮುಂಚೂಣಿ ಘಟಕದ ಅಧ್ಯಕ್ಷರುಗಳು ಬ್ಲಾಕ್ ಮಾಸಿಕ ಸಭೆಯಲ್ಲಿ ಬಾಗವಹಿಸಿದ್ದರು.



























