ವಿಧಾನಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಹಲವಾರು ಅಭ್ಯರ್ಥಿಗಳ ಹೆಸರು ಮುನ್ನಲೆಯಲ್ಲಿ ಕೇಳಿ ಬರುತ್ತಿದೆ. ಭಾರತೀಯ ಜನತಾ ಪಾರ್ಟಿಯಿಂದ ಈ ಭಾರೀಯಾದರೂ ಅರುಣ್ ಕುಮಾರ್ ಪುತ್ತಿಲ ರವರಿಗೆ ಸ್ಪರ್ಧಿಸಲು ಅವಕಾಶ ಸಿಗಬೇಕೆನ್ನುವುದು ಹಲವರ ಆಶಯವಾಗಿದೆ.
ಹೌದು.., ಈ ಬಾರಿ ಪುತ್ತೂರು ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಹಿಂದೂ ಸಂಘಟನೆಗಳ ಮುಖಂಡ, ಧಾರ್ಮಿಕ ಮುಂದಾಳು ಅರುಣ್ ಕುಮಾರ್ ಪುತ್ತಿಲ ರವರಿಗೆ ಸ್ಪರ್ಧಿಸಲು ಅವಕಾಶ ಸಿಗಬೇಕೆನ್ನುವುದು ಹಲವರ ಆಶಯವಾಗಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳು ಪ್ರಾರಂಭವಾಗಿವೆ.
ಅರುಣ್ ಕುಮಾರ್ ಪುತ್ತಿಲ ರವರಿಗೆ ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಟ್ವೀಟರ್ ಅಭಿಯಾನ ಕೂಡ ಪ್ರಾರಂಭವಾಗಿದೆ. ಜ.29 ರಂದು ಈ ಅಭಿಯಾನ ನಡೆಯಲಿದೆ.
ಅದೇ ರೀತಿ ಇಬ್ಬರು ಕಾರ್ಯಕರ್ತರು ಅರುಣ್ ಕುಮಾರ್ ಪುತ್ತಿಲ ರವರಿಗೆ ಈ ಬಾರಿ ಸ್ಪರ್ಧಿಸಲು ಅವಕಾಶ ಸಿಗಬೇಕೆಂದು ಕೋರಿ ದೇವರ ಮೊರೆ ಹೋಗಿದ್ದಾರೆ.
ಪ್ರವೀಶ್ ಈಶ್ವರಮಂಗಲ ಮತ್ತು ಅಶೋಕ್ ಬಲ್ಪ ಸುಬ್ರಹ್ಮಣ್ಯ ಎಂಬ ಇಬ್ಬರು ಕಾರ್ಯಕರ್ತರು ಈ ಬಾರಿ ಪುತ್ತಿಲರನ್ನು ಪುತ್ತೂರಿನ ಭಾಜಪ ಅಭ್ಯರ್ಥಿಯಾಗಿ ಆಯ್ಕೆ ಮಾಡುವಲ್ಲಿ ಯಾವುದೇ ಅಡೆ ತಡೆಗಳು ಬಾರದಂತೆ ಮತ್ತು ಕಾಣದ ಕೈಗಳು ಕೆಲಸ ಮಾಡದಂತೆ ನಿರ್ವಿಘ್ನದಿಂದ ಅಭ್ಯರ್ಥಿಯಾಗಿ ಆಯ್ಕೆಯಾದರೆ ಶ್ರೀ ಕ್ಷೇತ್ರ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಪಾದಯಾತ್ರೆ ಮಾಡುವುದಾಗಿ ಅಯ್ಯಪ್ಪನಿಗೆ ಹರಕೆ ಸಲ್ಲಿಸಿದ್ದು, ಈ ವಿಚಾರ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ. ಇವರುಗಳ ಈ ಅಭಿಮಾನಕ್ಕೆ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದು, ಇದಲ್ಲವೇ ಅಭಿಮಾನ ಎಂದೆಲ್ಲಾ ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ..