ಬೆಂಗಳೂರು: ನೋಟು ಅಮಾನ್ಯೀಕರಣಗೊಂಡ ಸಮಯದಲ್ಲಿ ಹಣ ಕೂಡಿಟ್ಟಿದ್ದ ಕೆಲವು ವ್ಯಕ್ತಿಗಳು ಇನ್ನು ಈ ನೋಟುಗಳು ಪ್ರಯೋಜನವಿಲ್ಲ ಎಂದು ಸಾರ್ವಜನಿಕ ಸ್ಥಳಗಳಲ್ಲಿ ಎಸೆದಿದ್ದರು. ಇದರ ಹೊರತಾಗಿ ಪಬ್ಗಳಲ್ಲಿ ಪಬ್ ಡ್ಯಾನ್ಸರ್ಗಳ ಮೇಲೆ ಹಣ ಎಸೆಯುವುದನ್ನು ನೋಡಬಹುದು. ಆದರೆ ಇಲ್ಲೊಬ್ಬ ವ್ಯಕ್ತಿ ನಗರದ ಕೆ.ಆರ್.ಮಾರ್ಕೆಟ್ ಫ್ಲೈಓವರ್ ಮೇಲೆ ಬಂದು ಹಣದ ಮಳೆ ಸುರಿಸಿ ಸ್ಥಳದಿಂದ ತೆರಳಿದ್ದಾನೆ.
ಈ ಪ್ರಕರಣ ಸಂಬಂಧ ತನಿಖೆಗೆ ಇಳಿದ ಪೊಲೀಸರು, ನಾಗರಬಾವಿಯ ಯೂಟ್ಯೂಬ್ ಚಾನಲ್ ಕಚೇರಿಯಲ್ಲಿ ಹಣ ಎಸೆದ ವ್ಯಕ್ತಿ ಇರುವುದನ್ನು ಖಚಿತಪಡಿಸಿ ಕಚೇರಿಗೆ ಎಂಟ್ರಿ ಕೊಟ್ಟು ವಶಕ್ಕೆ ಪಡೆದಿದ್ದಾರೆ. ಸದ್ಯ ಹಣ ಎಸೆದ ವ್ಯಕ್ತಿ ಅರುಣ್ ಎಂದು ತಿಳಿದು ಬಂದಿದ್ದು, ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಫ್ಲೈಓವರ್ನಿಂದ ಹಣ ಎಸೆದ ಘಟನೆ ಸಂಬಂಧ ಕರ್ನಾಟಕ ಪೊಲೀಸ್ ಕಾಯ್ದೆ 92ಡಿ, ಐಪಿಸಿ 283ರ ಅಡಿ ಎನ್ಸಿಆರ್ ಪ್ರಕರಣ ದಾಖಲಿಸಿದ ಕೆ.ಆರ್.ಮಾರ್ಕೆಟ್ ಠಾಣಾ ಪೊಲೀಸರು, ಕಾರಣ ನೀಡುವಂತೆ ನಾಗರಭಾವಿಯಲ್ಲಿರುವ ಹಣ ಎಸೆದ ಅರುಣ್ ನಿವಾಸಕ್ಕೆ ನೋಟಿಸ್ ಕಳುಹಿಸಿದ್ದರು. ಅದಾಗ್ಯೂ ಉತ್ತರಿಸದಿದ್ದಾಗ ಅರುಣ್ ನಾಗರಭಾವಿಯಲ್ಲಿರುವ ಯೂಟ್ಯೂಬ್ ಕಚೇರಿಯಲ್ಲಿ ಇರುವುದು ಪೊಲೀಸರಿಗೆ ಖಚಿತವಾಗಿದೆ. ಅದರಂತೆ ಕಚೇರಿಗೆ ತೆರಳಿದ ಪೊಲೀಸರು ಅರುಣ್ ಜೊತೆ ಮಾತುಕತೆ ನಡೆಸಿ ಠಾಣೆಗೆ ಕರೆದೊಯ್ದಿದ್ದಾರೆ.
ಹಣ ಎಸೆದ ಅರುಣ್ ಹೇಳುವುದೇನು..!!?
ನನಗೆ ಜ್ಞಾನ, ಬುದ್ಧಿ ಶಕ್ತಿ ಚೆನ್ನಾಗಿದೆ. ಕೆಟ್ಟ ಉದ್ದೇಶದಿಂದ ಹಣ ಎಸೆದಿಲ್ಲ ಎಂದು ಅರುಣ್ ಮಾಹಿತಿ ಹಂಚಿಕೊಂಡಿದ್ದಾನೆ. ನಾನು ವಿದ್ಯಾವಂತನಾಗಿದ್ದೇನೆ, ನನಗೂ ಬುದ್ಧಿಯಿದೆ. ಸಾರ್ವಜನಿಕವಾಗಿ ಹಣ ಎಸೆದಿದ್ದು ತಪ್ಪು ಎಂದು ನನಗೆ ಗೊತ್ತಿದೆ. ರೀಲ್ಸ್ ಮಾಡುವ ಉದ್ದೇಶದಿಂದ ಹಣ ಎಸೆದಿಲ್ಲ. ನನಗೆ ಸಮಯ ನೀಡಿದರೆ ಎಲ್ಲವನ್ನೂ ಹೇಳುತ್ತೇನೆ. ದಯವಿಟ್ಟು ನನಗೆ ಸಮಯ ಕೊಡಿ ಎಂದು ಹೇಳಿದ್ದಾನೆ.
ಹಣ ಎಸೆದ ಅರುಣ್ ವಿರುದ್ಧ ಎಫ್ಐಆರ್ ದಾಖಲು
ಫ್ಲೈಓವರ್ನಲ್ಲಿ ಹಣ ಎಸೆದ ಪ್ರಕರಣ ಸಂಬಂಧ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಲಾಗಿದೆ. ರಸ್ತೆಯಲ್ಲಿ ಹಣ ಎಸೆದು ಸಾರ್ವಜನಿಕರ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಹಾಗೂ ಜನರು ಅಪಾಯಕಾರಿಯಾಗಿ ಓಡಾಡುವಂತೆ ಮಾಡಿದ ಆರೋಪ ಮೇಲೆ ಪೊಲೀಸರು ಐಪಿಸಿ ಸೆಕ್ಷನ್ 283, 290, ಕೆಪಿ ಕಾಯ್ದೆ 92(D)ರಡಿ ಪ್ರಕರಣ ದಾಖಲಿಸಿದ್ದಾರೆ..