ಉಳ್ಳಾಲ: ಕರ್ನಾಟಕ – ಕೇರಳ ಗಡಿ ಪ್ರದೇಶವಾದ ನೆತ್ತಿಲಪದವು ಬಳಿ ಕಾರೊಂದರಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟವನ್ನು ಪತ್ತೆ ಹಚ್ಚಿರುವ ಕೊಣಾಜೆ ಪೊಲೀಸರು ಸುಮಾರು 27 ಲಕ್ಷ ರೂ ಮೌಲ್ಯದ 111 ಕೆ.ಜಿ. ಗಾಂಜಾವನ್ನು ವಶಕ್ಕೆ ತೆಗೆದುಕೊಂಡಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಕಡಪುರಂ ಹೊಸಬೆಟ್ಟು ನಿವಾಸಿ ಅಬೂಬಕ್ಕರ್ ಸಿದ್ದೀಕ್(35) ಅಲಿಯಾಸ್ ಹ್ಯಾರೀಸ್, ಕಾಸರಗೋಡು ಜಿಲ್ಲೆಯ ಮುದ್ರಾನ್ ಗ್ರಾಮದ ಕುಂಬಿ ನಿವಾಸಿ ಅಖೀಲ್ ಎಮ್(25) ಉದ್ಯಾವರ ಮಾಡ ನಿವಾಸಿ ಹೈದರ್ ಆಲಿ(39)ಅಲಿಯಾಸ್ ಗಾಡಿ ಹೈದರ್ ಬಂಧಿತರು.
111 ಕೆ.ಜಿ ಗಾಂಜಾ ಸಹಿತ ಸಾಗಾಟಕ್ಕೆ ಬಳಸಿದ್ದ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದು, ವಶಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ 32,07,000/- ಎಂದು ಅಂದಾಜಿಸಲಾಗಿದೆ.
ಆರೋಪಿಗಳಲ್ಲಿ ಅಬೂಬಕ್ಕರ್ ಸಿದ್ಧಿಕ್ ಯಾನೆ ಹ್ಯಾರಿಸ್ ಈ ಸಾಗಾಟ ಮುಖ್ಯ ಆರೋಪಿಯಾಗಿದ್ದು, ಈತನ ವಿರುದ್ಧ ಕೇರಳ, ಆಂದ್ರ ಪ್ರದೇಶದ ಪೊಲೀಸ್ ಠಾಣೆಯಲ್ಲಿ ಗಾಂಜಾ ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿದೆ.
ಉಳ್ಳಾಲದಿಂದ ಕಾರು ಬಾಡಿಗೆ ಪಡೆದು ಈ ತಂಡ ಆಂದ್ರ ಪ್ರದೇಶದ ವಿಶಾಖಪಟ್ಟಣಂನಿಂದ ಗಾಂಜಾವನ್ನು ಕೇರಳಕ್ಕೆ ಸಾಗಾಟ ನಡೆಸುತ್ತಿದ್ದು, ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕೊಣಾಜೆ ಪೊಲೀಸ್ ಠಾಣಾ ಎಸ್ಐ ಶರಣಪ್ಪ ನೇತೃತ್ವದ ಪೊಲೀಸ್ ತಂಡ ನೆತ್ತಿಲಪದವು ಬಳಿ ಕಾರನ್ನು ವಶಕ್ಕೆ ತೆಗೆದುಕೊಂಡಿದ್ದರು. ಪೊಲೀಸ್ ಠಾಣಾ ಮಟ್ಟದಲ್ಲಿ ಅತೀ ದೊಡ್ಡ ಗಾಂಜಾ ಸಾಗಾಟವನ್ನು ಪತ್ತೆ ಹಚ್ಚಿರುವ ಕೊಣಾಜೆ ಪೊಲೀಸರ ತಂಡ ಕಳೆದ ಎರಡು ತಿಂಗಳ ಅಂತರದಲ್ಲಿ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಪಿಎಸ್ಐ ಶರಣಪ್ಪ ನೇತೃತ್ವದಲ್ಲಿ ನಾಲ್ಕು ಭರ್ಜರಿ ಮಾದಕ ದ್ರವ್ಯಗಳ ಪ್ರಕರಣಗಳ ಬೇಟೆ ನಡೆಸುವ ಮೂಲಕ ಗಡಿಭಾಗದಲ್ಲಿ ಮಾದಕ ದ್ಯವ್ಯ ಸಾಗಾಟವನ್ನು ಮಟ್ಟ ಹಾಕುವಲ್ಲಿ ಯಶಸ್ವಿಯಾಗಿದೆ.
ಪೊಲೀಸ್ ಆಯುಕ್ತರಾದ ಶಶಿಕುಮಾರ್,ಡಿಸಿಪಿಗಳಾದ ಅಂಶು ಕುಮಾರ್,ಅನೇಶ್ ಕುಮಾರ್, ಸಹಾಯಕ ಪೊಲೀಸ್ ಆಯುಕ್ತೆ ಧನ್ಯಾ ನಾಯಕ್ ರವರ ನಿರ್ದೇಶನದಂತೆ ಕೊಣಾಜೆ ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ದೇವಾಡಿಗರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಶರಣಪ್ಪ ಭಂಡಾರಿ ಹಾಗೂ ಸಿಬ್ಬಂದಿಗಳಾದ ಶೈಲೇಂದ್ರ,ನವೀನ್, ವಿನ್ಸೆಂಟ್ ರೊಡ್ರಿಗಸ್, ಶಿವಕುಮಾರ್, ಪುರುಷೋತ್ತಮ, ಸುರೇಶ್, ದೀಪಕ್, ಬರಮ್ ಬಡಿಗೇರ, ಹೇಮಂತ್, ದೇವರಾಜ್, ಸುನೀತಾ, ಮಹಮ್ಮದ್ ಗೌಸ್ ಹಾಗೂ ತಾಂತ್ರಿಕ ವಿಭಾಗದ ಮನೋಜ್ ರವರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು..