ವಿಟ್ಲ: ಬಂಟ್ವಾಳ ತಾಲೂಕು ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ದರ್ಗಾದ ಬಳಿ ಫೋನ್ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಮೂವರು ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ಮೊಹಮ್ಮದ್ ಅನ್ವರ್ ಎಂದು ಗುರುತಿಸಲಾಗಿದ್ದು, ಸಿನಾನ್ ಯಾನೆ ಚಿನ್ನು, ರಾಬಿ, ಶಿಯಾಬ್ ಯಾನೆ ಮೂಚಿ ಆರೋಪಿಗಳಾಗಿದ್ದಾರೆ.

ಮಂಗಳವಾರ ರಾತ್ರಿ ಕಂಬಳಬೆಟ್ಟು ಜಂಕ್ಷನ್ ಬಳಿಯಲ್ಲಿನ ಕಂಬಳಬೆಟ್ಟು ದರ್ಗಾದ ಬಳಿ ಮೊಹಮ್ಮದ್ ಅನ್ವರ್ ಎಂಬವರು ಫೋನ್ನಲ್ಲಿ ಮಾತನಾಡುತ್ತಿದ್ದಾಗ ಆಪಾದಿತರುಗಳಾದ, ಸಿನಾನ್ ಯಾನೆ ಚಿನ್ನು, ರಾಬಿ ಹಾಗೂ ಶಿಯಾಬ್ ಯಾನೆ ಮೂಚಿ ಮೂರು ಮಂದಿ ದ್ವಿಚಕ್ರ ವಾಹನದಲ್ಲಿ ಬಂದು ಕಮೆಂಟ್ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬಳಿಕ ಸಿನಾನ್ ಅಲ್ಲೇ ಇದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಅನ್ವರ್ ಕುತ್ತಿಗೆಯ ಹಿಂಭಾಗ ಹಾಗೂ ಎರಡೂ ಕೈಗಳ ಮೊಣ ಕೈಗಳ ಭಾಗಕ್ಕೆ ಹೊಡೆದಿದ್ದು, ರಾಬಿ ಕಲ್ಲಿನಿಂದ ಹಿಂಬದಿಯ ಸೊಂಟಕ್ಕೆ ಮತ್ತು ಬೆನ್ನಿಗೆ ಗುದ್ದಿದ್ದಾನೆ. ಶಿಯಾಬ್ ಅನ್ವರ್ ನೆಲಕ್ಕೆ ಬಿದ್ದಾಗ ಎದೆಗೆ ಕಚ್ಚಿದಾಗ ಈ ಘಟನೆಯನ್ನು ನೋಡಿದ ಸ್ಥಳೀಯ ಮೂವರು ವ್ಯಕ್ತಿಗಳು ಅನ್ವರು ಬಳಿಗೆ ಬರುವುದನ್ನು ಕಂಡು ಆ ಮೂವರು ದ್ವಿಚಕ್ರ ವಾಹನಗಳಲ್ಲಿ ಓಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬಳಿಕ ಅನ್ವರ್ ವಿಟ್ಲ ಸರಕಾರಿ ಆಸ್ಪತ್ರೆಗೆ ಹೋಗಿ ಪ್ರಥಮ ಚಿಕಿತ್ಸೆಯನ್ನು ಪಡೆದಿದ್ದು, ಬಳಿಕ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ವರದಿಯಾಗಿದೆ..