ಈಶ್ವರಮಂಗಲ: ಜಾಗೃತ ಹಿಂದು ಜಾಗರಣ ಈಶ್ವರಮಂಗಲ ಇದರ ನೇತೃತ್ವದಲ್ಲಿ ನಡೆಯುತ್ತಿರುವ ಜಾಗರಣ ಆಂಬುಲೆನ್ಸ್ ಸೇವೆಯ ಪಯಣ ಒಂದು ಲಕ್ಷ ದಾಟಿದ ಹಿನ್ನೆಲೆಯಲ್ಲಿ, “ಸಾರ್ಥಕ ಸೇವೆ – ಆಂಬುಲೆನ್ಸ್ ಪಯಣ ಲಕ್ಷ ದಾಟಿದಾಗ” ಎಂಬ ಅರ್ಥಪೂರ್ಣ ಕಾರ್ಯಕ್ರಮ ಹಾಗೂ ಆಂಬುಲೆನ್ಸ್ ಚಾಲಕರಿಗೆ ಪ್ರಥಮ ಚಿಕಿತ್ಸಾ ತರಬೇತಿ ಮತ್ತು ಐಡಿ ಕಾರ್ಡ್ ವಿತರಣೆ ಕಾರ್ಯಕ್ರಮವು ಇಂದು ಈಶ್ವರಮಂಗಲದ ಅನುಗ್ರಹ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಕೃಷ್ಣ ಭಟ್ ಮುಂಡ್ಯ ವಹಿಸಿದ್ದರು. ಅವರು ಜಾಗೃತ ಹಿಂದು ಜಾಗರಣದ ವಿವಿಧ ಸೇವಾ ಚಟುವಟಿಕೆಗಳನ್ನು ಸ್ಮರಿಸಿ, ಆಂಬುಲೆನ್ಸ್ ಸೇವೆಯ ಮಹತ್ವವನ್ನು ವಿವರಿಸಿದರು.
ಡಾ. ಗೋಪಾಲಕೃಷ್ಣ ನಾಯಕ್, ಡಾ. ಶ್ರೀಕುಮಾರ್ ಕತ್ರಿಬೈಲು ಹಾಗೂ ಡಾ. ಅಜಿತ್ ಅವರು ಆಂಬುಲೆನ್ಸ್ ಚಾಲಕರಿಗೆ ಪ್ರಥಮ ಚಿಕಿತ್ಸೆಯ ಕುರಿತು ತರಬೇತಿ ನೀಡಿದರು.
ಉದ್ಯಮಿ ಶ್ರೀಕೃಷ್ಣ ಪ್ರಸಾದ್ ಭಟ್ ಕೊಂಬೆಟ್ಟು ಮಾತನಾಡಿ, ಸಂಘಟನೆಯ ಸೇವಾ ಕಾರ್ಯವನ್ನು ಅಭಿನಂದಿಸಿ, “ನಿಮ್ಮ ಸೇವಾ ಕಾರ್ಯದೊಂದಿಗೆ ಸರ್ವ ರೀತಿಯಲ್ಲೂ ಕೈಜೋಡಿಸಿ ಜೊತೆಯಾಗಿರುತ್ತೇನೆ” ಎಂದು ಭರವಸೆ ನೀಡಿದರು.
ರಕ್ಷಾ ಕ್ಲಿನಿಕ್ನ ಮಾಲೀಕರಾದ ಚಿನ್ಮಯ್ ಕೃಷ್ಣ ಪುತ್ತೂರು ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಜಾತಿ-ಮತದ ಬೇಧವಿಲ್ಲದೆ ಕ್ಲಪ್ತ ಸಮಯದಲ್ಲಿ ರೋಗಿಗಳನ್ನು ಚಿಕಿತ್ಸೆಗೆ ತಲುಪಿಸುತ್ತಿರುವ ಆಂಬುಲೆನ್ಸ್ ಚಾಲಕರಿಗೆ ಕೃತಜ್ಞತೆ ಸಲ್ಲಿಸಿ, ಅವರ ಸೇವೆಯನ್ನು ಶ್ಲಾಘಿಸಿದರು.
ಖಾದರ್ ನರಸಿನಡ್ಕ ಅವರು ಮಾತನಾಡಿ, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಜಾಗರಣ ಆಂಬುಲೆನ್ಸ್ ಕಾರ್ಯಕರ್ತರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಕೃತಜ್ಞತೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಜಾಗರಣ ಆಂಬುಲೆನ್ಸ್ ಚಾಲಕರಿಗೆ ಐಡಿ ಕಾರ್ಡ್ಗಳನ್ನು ವಿತರಿಸಲಾಯಿತು. ರಾಜೇಶ್ ಪಂಚೋಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ಐದು ವರ್ಷಗಳ ಜಾಗರಣ ಆಂಬುಲೆನ್ಸ್ ಸೇವೆಯ ಸಂಪೂರ್ಣ ಚಟುವಟಿಕೆಗಳು, ಸೇವಾ ವಿವರಗಳು ಹಾಗೂ ಲೆಕ್ಕಾಚಾರದ ಮಾಹಿತಿಯನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಚಾಲಕರ ಅನುಭವಗಳನ್ನೂ ಹಂಚಿಕೊಳ್ಳಲಾಯಿತು.
ಗೌರೀಶ್ ಈಶ್ವರಮಂಗಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜಯರಾಜ್ ಈಶ್ವರಮಂಗಲ ಸಹಕರಿಸಿದರು.
ಕಾರ್ಯಕ್ರಮದಲ್ಲಿ ರಾಮಪ್ರಸಾದ್ ಆಳ್ವ ಮೇನಾಲ, ಅಮರನಾಥ ಆಳ್ವ ಕರ್ನೂರು ಗುತ್ತು, ಮಧುಕರ್ ರೈ ನೆಲ್ಲಿತ್ತಡ್ಕ, ವಿನೋದ್ ರೈ ಕರ್ಪುಡಿಕಾನ, ಹಿಂದು ಐಕ್ಯವೇದಿ ದೇಲಂಪಾಡಿಯ ಪದಾಧಿಕಾರಿಗಳು, ಜಾಗರಣ ಆಂಬುಲೆನ್ಸ್ ಚಾಲಕರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.



























