ಪುತ್ತೂರು: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕಾರಣಿಗಳು, ಜನಪ್ರತಿನಿಧಿಗಳು ಮಾತನಾಡುವ ಪ್ರತಿಯೊಂದು ಮಾತಿಗೂ ಬೇರೆಯದ್ದೆ ಅರ್ಥ ಕಲ್ಪಿತವಾಗುವುದು ಸಹಜ., ಅದೇ ರೀತಿ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ರವರ ಹೇಳಿಕೆಯೊಂದು ಇದೀಗ ಚರ್ಚೆಗೆ ಕಾರಣವಾಗಿದೆ.
ಸಚಿವರಾದ ಸುನಿಲ್ ಕುಮಾರ್ ರವರು ನಿನ್ನೆ ಪುತ್ತೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪಯಾತ್ರೆಯಲ್ಲಿ ಹಾಗೂ ಕಳೆದ ಕೆಲ ತಿಂಗಳ ಹಿಂದೆ ನೀಡಿದ ಹೇಳಿಕೆಯೊಂದರಲ್ಲಿ ಸರಕಾರದ ವತಿಯಿಂದ ಹನುಮಗಿರಿ ಕ್ಷೇತ್ರಕ್ಕೆ 100 ಕೋಟಿ ಅನುದಾನ ನೀಡಿದ್ದಾಗಿ ಹೇಳಿದ್ದು, ಈ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ನಿನ್ನೆ ಪುತ್ತೂರಿನಲ್ಲಿ ನಡೆದ ಬಿಜೆಪಿಯ ವಿಜಯ ಸಂಕಲ್ಪಯಾತ್ರೆಯಲ್ಲಿ ಮಾತನಾಡಿದ ಸಚಿವರು, ‘ಯಾವ ವಿಚಾರಗಳನ್ನು ಸಿದ್ದಾಂತದ ರೂಪದಲ್ಲಿ ಹೇಳುತ್ತಾ ಬಂದಿದ್ದೇವೊ ಅದನ್ನು ಆಡಳಿತಕ್ಕೆ ಬಂದಾಗ ಈಡೇರಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಸರ್ಕಾರ ಮಾಡುತ್ತಾ ಬಂದಿದೆ.ಎಷ್ಟೋ ವರುಷದ ಕನಸಾದ ರಾಮಮಂದಿರ ನಿರ್ಮಾಣಕ್ಕೆ ಬಿಜೆಪಿ ಸರ್ಕಾರದ ಆವಧಿಯಲ್ಲಿ ಶಂಕುಸ್ಥಾಪನೆ ಮಾಡಲಾಯಿತು. ಕಾಶಿಯಲ್ಲಿ ಕಾರಿಡಾರ್, ಉಜ್ಜಯಿನಿಯಲ್ಲಿ ಕಾರಿಡಾರ್ ನಿರ್ಮಾಣ ಮಾಡಲಾಯಿತು. ಸಾಂಸ್ಕೃತಿಕ ಭಾರತ ಎನ್ನುವ ವರ್ಣನೆಗೆ ಇನ್ನಷ್ಟು ಮೆರೆಗು ನೀಡುವ ಕಾರ್ಯವನ್ನು ಅಭಿವೃದ್ಧಿ ಮುಖಾಂತರ, ಹಿಂದುತ್ವದ ಮುಖಾಂತರ ಬಿಜೆಪಿ ಸರ್ಕಾರ ಮಾಡಿದೆ.ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರಲಾಯಿತು. ಮತಾಂತರ ನಿಷೇಧ ಕಾನೂನನ್ನು ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ., ಲವ್ ಜಿಹಾದ್ ಗೆ ಕಡಿವಾಣದ ಕಾನೂನು ತಂದಿದ್ದು ಬಿಜೆಪಿ ಸರ್ಕಾರ.., ಹನುಮಗಿರಿಗೆ 100 ಕೋಟಿ ರೂ. ನೀಡಿದ್ದು ಇದೇ ಬಿಜೆಪಿ ಸರ್ಕಾರ, ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕಕ್ಕೆ ಆದೇಶವನ್ನು ನೀಡಿದ್ದು ಇದೇ ಬಿಜೆಪಿ ಸರ್ಕಾರ’ ಎಂದು ಸರಕಾರದ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು.
ಆದರೇ ಹನುಮಗಿರಿಗೆ 100 ಕೋಟಿ ರೂ. ಸರ್ಕಾರ ನೀಡಿದೆ ಎನ್ನುವ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಶ್ರೀಕ್ಷೇತ್ರ ಹನುಮಗಿರಿಯ ಆಡಳಿತ ಧರ್ಮದರ್ಶಿಗಳು ಸ್ಪಷ್ಟೀಕರಣ ನೀಡಿದ್ದು, ಮಾ.11 ರಂದು ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಸಚಿವರಾದ ಸುನಿಲ್ ಕುಮಾರ್ ರವರು ಹನುಮಗಿರಿಗೆ ಸರಕಾರದ ವತಿಯಿಂದ 100 ಕೋಟಿ ರೂ. ಅನುದಾನ ನೀಡಿರುವುದಾಗಿ ಹೇಳಿರುವುದು ವರದಿಯಾಗಿದೆ. ಆದರೆ ಶಾಸಕರು ಇಂಟರ್ ಲಾಕ್ ಅಳವಡಿಕೆಗೆ 25 ಲಕ್ಷ ರೂ. ಅನುದಾನವನ್ನು ಒದಗಿಸಿ ಕೊಟ್ಟಿರುತ್ತಾರೆ. ಬೇರೆ ಯಾವುದೇ ಧನಸಹಾಯವನ್ನು ಹನುಮಗಿರಿಗೆ ಸರಕಾರದ ವತಿಯಿಂದ ಕೇಳಿರುವುದಿಲ್ಲ, ಬಂದಿರುವುದು ಇಲ್ಲ ಎಂದು ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇವೆ.
ಇತ್ತೀಚಿಗೆ ಬೇರೆ ಯಾವುದೋ ಕಾರ್ಯಕ್ರಮದಲ್ಲಿಯೂ ಇದೇ ರೀತಿ ಮಾಹಿತಿ ನೀಡಿರುತ್ತಾರೆ. ಸಚಿವರು ಬಹುಶಃ ಬಾಯಿ ತಪ್ಪಿನಿಂದ ಅಥವಾ ಮಾಹಿತಿ ಕೊರತೆಯಿಂದ ಹೇಳಿರಬಹುದೆಂದು ಭಾವಿಸಿರುತ್ತೇವೆ’ ಎಂದು ಸ್ಪಷ್ಟೀಕರಣ ನೀಡಿದ್ದಾರೆ.