ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದಿಂದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದ ಹೆಚ್.ಎಂ ನಂದಕುಮಾರ್ ಅವರಿಗೆ ಟಿಕೆಟ್ ನೀಡದೇ ಇರುವುದನ್ನು ಖಂಡಿಸಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಂದಕುಮಾರ್ ಅವರ ಅಭಿಮಾನಿ ಬಳಗದವರ ಸಭೆ ಮಾ.26ರಂದು ಸುಳ್ಯ ಮತ್ತು ಕಡಬದಲ್ಲಿ ನಡೆಯಿತು.
ಸುಳ್ಯದ ಯುವಜನ ಸಂಯುಕ್ತ ಸಭಾಭವನ ಹಾಗೂ ಕಡಬದ ಅನುಗ್ರಹ ಸಭಾಭವನದಲ್ಲಿ ಸಭೆ ನಡೆಯಿತು. ಸುಳ್ಯದಲ್ಲಿ ಇನ್ನೂರಷ್ಟು ಜನರಿದ್ದರೆ., ಕಡಬದಲ್ಲಿ 700ರಷ್ಟು ಜನ ಕಾರ್ಯಕರ್ತರು ಸಭೆಯಲ್ಲಿ ಸೇರಿದ್ದರು.ಬೆಳಿಗ್ಗೆ 10 ಗಂಟೆಗೆ ಸುಳ್ಯದಲ್ಲಿ ಸಭೆ ನಡೆಯಿತು. ಸಂಜೆ 4 ಗಂಟೆಗೆ ಕಡಬದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ಕಾರ್ಯಕರ್ತರ ಸಮೂಹವೇ ಬೆಂಗಳೂರಿಗೆ ನಾಳೆ ತೆರಳಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಮೊದಲಾದ ಮುಖಂಡರುಗಳನ್ನು ಭೇಟಿ ನೀಡಿ ಮನವಿ ನೀಡಲಾಗುವುದು ಎಂದು ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಯಿತು.
ಸಭೆಯುದ್ದಕ್ಕೂ ನಂದಕುಮಾರ್ ಅವರಿಗೆ ಅವಕಾಶ ನೀಡದಿರುವುದಕ್ಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸುತ್ತಿದ್ದು, ನಾವು ಕಾಂಗ್ರೆಸ್ಸಿಗರು, ನಮಗೆ ಸುಳ್ಯದಲ್ಲಿ ಕಾಂಗ್ರೆಸ್ ಗೆಲ್ಲಬೇಕು ಎನ್ನುವ ಉದ್ದೇಶ ಇದೆ, ಹಾಗಾಗಿ ಜನರೊಂದಿಗೆ ಬೆರೆಯುವ, ಕ್ಷೇತ್ರದಲ್ಲಿ ಅಪಾರ ಜನ ಬೆಂಬಲ ಹೊಂದಿರುವ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವುದು ನಮ್ಮ ಆಗ್ರಹವಾಗಿತ್ತು. ಅದನ್ನು ಪರಿಗಣಿಸದೇ ಹೈಕಮಾಂಡ್ ತಪ್ಪು ನಿರ್ಧಾರ ಮಾಡಿದೆ ಎಂದು ಕಾರ್ಯಕರ್ತರು ಆಕ್ರೋಶಿತರಾಗಿ ಹೇಳಿಕೊಂಡಿದ್ದಾರೆ.
ಹೆಚ್.ಎಂ ನಂದಕುಮಾರ್ ಅವರು ಕಳೆದ ನಾಲ್ಕು ವರ್ಷಗಳಿಂದ ಸುಳ್ಯ ಕ್ಷೇತ್ರದಲ್ಲಿ ನಿರಂತರವಾಗಿ ಓಡಾಡಿಕೊಂಡು ಕಾರ್ಯಕರ್ತರೊಂದಿಗೆ ಬೆರೆಯುತ್ತಾ ಪಕ್ಷವನ್ನು ತಳಮಟ್ಟದಿಂದ ಪಕ್ಷ ಸಂಘಟಿಸುತ್ತಿದ್ದಾರೆ. ಕೋವಿಡ್ ಸಮಯದಲ್ಲಿ ಕ್ಷೇತ್ರದ ಬಹುತೇಕ ಕಡೆ ಆಹಾರ ಕಿಟ್ಗಳನ್ನು ವಿತರಿಸಿ ಮನೆ ಮಾತಾಗಿದ್ದಾರೆ. ಪ್ರಬಲ ಜಾತ್ಯಾತೀತ ಸಿದ್ಧಾತಂದೊಂದಿಗೆ ಕ್ಷೇತ್ರದಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಹೋಗುತ್ತಿದ್ದ ಇವರಿಗೆ ಎಲ್ಲಾ ಜಾತಿ ಧರ್ಮದವರ ಬೆಂಬಲ ಹೊಂದಿದ್ದಾರೆ. ಅಂತಹ ನಾಯಕನನ್ನು ಕಡೆಗಣಿಸಿರುವುದು ಕಾಂಗ್ರೆಸ್ಗೆ ದೊಡ್ಡ ನಷ್ಟ ಉಂಟು ಮಾಡಲಿದೆ ಎಂದು ಸಭೆಯಲ್ಲಿದ್ದವರು ಅಭಿಪ್ರಾಯಿಸಿದ್ದಾರೆ.
ನಂದಕುಮಾರ್ ಅವರಿಗೆ ಟಿಕೆಟ್ ಸಿಕ್ಕಿದರೆ ಸುಳ್ಯದಲ್ಲಿ ಈ ಬಾರಿ ಕಾಂಗ್ರೆಸ್ ನೂರಕ್ಕೆ ನೂರು ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ. ಸುಳ್ಯ ಕ್ಷೇತ್ರದಲ್ಲಿ ನಂದಕುಮಾರ್ ಪರ ಅಲೆ ಇದೆ. ಕಾರ್ಯಕರ್ತರು ನಂದಕುಮಾರ್ ಪರವಾಗಿದ್ದಾರೆ. ಹಾಗಿದ್ದರೂ ಅವರನ್ನು ಕಡೆಗಣಿಸಿರುವ ಪಕ್ಷದ ವರಿಷ್ಠರ ತೀರ್ಮಾನ ಒಪ್ಪಲು ಸಾಧ್ಯವಿಲ್ಲ ಎಂದು ಸಭೆಯಲ್ಲಿದ್ದ ಅಸಮಾಧಾನಿತರು ಹೇಳಿಕೊಂಡಿದ್ದಾರೆ.ಇಲ್ಲಿ ಈ ಬಾರಿ ಕಾಂಗ್ರೆಸ್ ಗೆಲ್ಲುವ ಸಾಧ್ಯತೆ ನಿಶ್ಚಲವಾಗಿದ್ದರೂ ಕಾಂಗ್ರೆಸ್ ಹೈಕಮಾಂಡ್ ಮತ್ತೊಮ್ಮೆ ಇಲ್ಲಿ ಸೋಲಲು ತಪ್ಪು ನಿರ್ಧಾರ ಮಾಡಿದೆಯೇ ಎಂದು ಕೆಲವರು ಪ್ರಶ್ನಿಸಿದರು.
ನಾವು ಸಭೆ ಸೇರಿರುವುದು ಪಕ್ಷದ ಗೆಲ್ಲುವ ಅಭ್ಯರ್ಥಿ ನಂದಕುಮಾರ್ ಅವರಿಗೆ ಟಿಕೆಟ್ ನೀಡಬೇಕೆನ್ನುವ ಉದ್ದೇಶಕ್ಕೆ ಹೊರತು ಪಕ್ಷ ವಿರೋಧಿಯಾಗಿ ಸಭೆ ನಡೆಸಿದ್ದಲ್ಲ. ನಮ್ಮ ಬೇಡಿಕೆಯನ್ನು ಮನ್ನಿಸದಿದ್ದರೆ ಅದರ ಪರಿಣಾಮ ಮುಂದಕ್ಕೆ ಎದುರಿಸಬೇಕಾದೀತು ಎಂದು ಕಾರ್ಯಕರ್ತರು ಎಚ್ಚರಿಕೆ ನೀಡಿದರು.