ಪುತ್ತೂರು : ಓವರ್ ಹೆಡ್ ನೀರಿನ ಟ್ಯಾಂಕ್ ಒಳಗೆ ಯುವಕನೋರ್ವನ ಮೃತದೇಹ ಪತ್ತೆಯಾದ ಘಟನೆ ಅರಿಯಡ್ಕದಲ್ಲಿ ನಡೆದಿದೆ.
ಮೃತರನ್ನು ಪುತ್ತೂರು ತಾಲೂಕಿನ ಮಾಡ್ನೂರು ಗ್ರಾಮದ ತೋಟದಮೂಲೆ ಎಂಬಲ್ಲಿನ ನಿವಾಸಿ ದಿನೇಶ್ ಎಂದು ಗುರುತಿಸಲಾಗಿದೆ.
ದಿನೇಶ್ ರಿಗೆ ಮದ್ಯಪಾನದ ಚಟವಿತ್ತು ಎನ್ನಲಾಗಿದ್ದು, ಮೂರು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದರು. ಇದೀಗ ಅವರ ಮೃತದೇಹ ಪಂಚಾಯತ್ ನೀರು ಸರಬರಾಜಿನ ಓವರ್ ಹೆಡ್ ಟ್ಯಾಂಕ್ ನಲ್ಲಿ ಪತ್ತೆಯಾಗಿದೆ.
ವಿದ್ಯುತ್ ಸಮಸ್ಯೆಯ ಕಾರಣದಿಂದಾಗಿ ಕಳೆದ ಮೂರು ದಿನಗಳಿಂದ ಈ ಓವರ್ ಹೆಡ್ ಟ್ಯಾಂಕ್ ನಲ್ಲಿ ನೀರು ತುಂಬಿಸಿರಲಿಲ್ಲ. ಸೋಮವಾರ ವಿದ್ಯುತ್ ಸಮಸ್ಯೆ ಸರಿಪಡಿಸಲಾಗಿತ್ತು. ಬಳಿಕ ಟ್ಯಾಂಕ್ ಗೆ ನೀರು ತುಂಬಿಸಲಾಗಿತ್ತು.
ಮಂಗಳವಾರ ನೀರು ಬಿಡುವಾತ ನೀರು ತುಂಬಿರುವ ಬಗ್ಗೆ ಟ್ಯಾಂಕ್ ಗೆ ಹತ್ತಿ ಪರಿಶೀಲನೆ ನಡೆಸುತ್ತಿದ್ದಾಗ ಮೃತದೇಹ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಳಿಕ ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.