ಪುತ್ತೂರು : ಸರ್ಕಾರಿ ಬಸ್ ನಿಲ್ದಾಣದ ಮುಂಭಾಗ ಬಿಜೆಪಿ ನಾಯಕರ ಫೋಟೋವಿದ್ದ ಬ್ಯಾನರ್ ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಯುವಕರನ್ನು ವಶಕ್ಕೆ ಪಡೆದ ಪೊಲೀಸರು ಅವರಿಗೆ ಥಳಿಸಿ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದ್ದು, ಈ ಬಗ್ಗೆ ಹಲ್ಲೆಗೊಳಗಾದ ಯುವಕರಲ್ಲಿಯೋರ್ವ ಪ್ರತಿಕ್ರಿಯಿಸಿದ್ದು, ‘ರಾತ್ರಿ ವೇಳೆ ಅರುಣ್ ಅಣ್ಣ ಠಾಣೆಗೆ ಬರದೆ ಇರುತ್ತಿದ್ದರೆ ನಮ್ಮ ಲಾಕಪ್ ಡೆತ್ ಆಗುತ್ತಿತ್ತು’ ಎಂದು ಹೇಳಿದ್ದಾರೆ.
‘ನಾವು ಫ್ರೆಂಡ್ಸ್ ಯಾವಾಗಲು ಮನೆಯ ಪಕ್ಕದ ಕಟ್ಟೆಯಲ್ಲಿ ಕುಳಿತುಕೊಳ್ಳುತ್ತಿದ್ದು, ಮೇ.15 ರಂದು ನಾವು ಅಲ್ಲಿಯೇ ಕುಳಿತುಕೊಂಡಿದ್ದೇವು. ಈ ವೇಳೆ ಆಗಮಿಸಿದ ಪೊಲೀಸರು ನಿಮ್ಮ ಜೊತೆ ಮಾತನಾಡಲು ಇದೆ ಎಂದು ಹೇಳಿ ಠಾಣೆಗೆ ಕರೆದುಕೊಂಡು ಹೋಗಿದ್ದು, ಮಂಜಲ್ಪಡ್ಪು ಸಮೀಪ ಇರುವ ಡಿವೈಎಸ್ಪಿ ಕಚೇರಿಗೆ ನಮ್ಮನ್ನು ಕರೆದುಕೊಂಡು ಹೋಗಿರುತ್ತಾರೆ.
ಈ ವೇಳೆ ನನ್ನ ಬಳಿ ಅವಿನಾಶ್ ಯಾರು ಎಂದು ಕೇಳಿದ್ದು, ಆಗ ನಾನೇ ಅವಿನಾಶ್ ಎಂದು ಹೇಳಿದಾಗ ನನಗೆ ಹೊಡೆಯಲು ಪ್ರಾರಂಭಿಸಿದರು. ಯಾಕೇ ಎಂದು ಕೇಳಿದಾಗ ಹೇಳಲಿಲ್ಲ., ನೀನು ಭಾರೀ ಹಾರಾಡ್ತೀಯಾ ಎಂದು ಹೇಳಿ ನನ್ನ ಮೇಲೆ ಹಲ್ಲೆ ನಡೆಸಿದರು.
ಡಿವೈಎಸ್ಪಿ ಅವರು ಅವರ ಚೇಂಬರ್ ಗೆ ಕರೆದುಕೊಂಡು ಹೋಗಿ ಬಟ್ಟೆ ತೆಗೆಸಿ ಹೊಡೆಯಲು ಪ್ರಾರಂಭಿಸಿದ್ದು, ತೊಡೆಯ ಭಾಗಕ್ಕೆ, ಕಾಲಿನ ಪಾದಕ್ಕೆ ಹಾಗೂ ಕೆನ್ನೆಗೆ ಹೊಡೆದಿದ್ದು, ಪೊಲೀಸರು ಕೆನ್ನೆಗೆ ಹೊಡೆದ ಪರಿಣಾಮ ಕಿವಿ ನೋವಾಗಿದ್ದು, ಸ್ವಲ್ಪ ಕೇಳಿಸದ ಹಾಗೆಯೂ ಆಗಿದೆ. ಗನ್ ತೋರಿಸಿ ನಮ್ಮನ್ನು ಭಯಪಡಿಸಿದ್ದು, ನಾವೇ ಮಾಡಿದ್ದು ಎಂದು ಒಪ್ಪಿಕೊಳ್ಳಬೇಕು ಎಂದು ಹೇಳುತ್ತಿದ್ದರು.
ರಾತ್ರಿ ವೇಳೆ ಅರುಣ್ ಅಣ್ಣ ಠಾಣೆಗೆ ಬರದೇ ಇರುತ್ತಿದ್ದರೆ., ಬೆಳಿಗ್ಗೆ ತನಕ ನಮಗೆ ಹೊಡೆದು ನಮ್ಮ ಲಾಕಪ್ ಡೆತ್ ಆಗುತ್ತಿತ್ತು. ಹೊಡೆಯುವಾಗ ಡಿವೈಎಸ್ಪಿ ಸರ್ ರೇ ಇದ್ದದ್ದು, ಸಂಪ್ಯ ಎಸ್.ಐ. ಹಾಗೂ ಪೊಲೀಸ್ ಮತ್ತಿಬ್ಬರು ಅಧಿಕಾರಿಗಳಿದ್ದರು. ನಮಗೆ ಹೊಡೆಯುವಾಗ ಅಧಿಕಾರಿಗಳು ಹೇಳುತ್ತಿದ್ದರು., ನಾವು ಊಟ ಕೂಡ ಮಾಡ್ಲಿಲ್ಲ.., ಬೆಳ್ಳಿಗೆಯಿಂದ ಸುಮಾರು 200, 300 ಫೋನ್ ಕರೆಗಳು ಬಂದಿವೆ. ಬ್ಯಾನರ್ ನಲ್ಲಿರುವವರು ಪಕ್ಷದ ಉತ್ತಮ ಹುದ್ದೆಯಲ್ಲಿರುವವವರು ಇದು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದೆ. ಹೀಗಾಗಿ ನಿಮ್ಮನ್ನು ಹಿಡಿಯಬೇಕು ಎಂದು ಮೇಲಿಂದ ಒತ್ತಡ ಹಾಕುತ್ತಿದ್ದಾರೆ ನಮ್ಮನ್ನು ಕುಳಿತುಕೊಳ್ಳಲು ಸಹ ಬಿಡುತ್ತಿಲ್ಲ ಎಂದೆಲ್ಲಾ ಹೇಳಿ ನಮಗೆ ಹೊಡೆಯುತ್ತಿದ್ದರು ಎಂದು ಅವರು ತಿಳಿಸಿದ್ದಾರೆ..