ಪುತ್ತೂರು : ಸಂಬಂಧಿಕರ ಮನೆಗೆ ಬಂದಿದ್ದ ವ್ಯಕ್ತಿಯೋರ್ವರು ರಸ್ತೆಯಲ್ಲಿ ತೆರಳುತ್ತಿದ್ದ ವೇಳೆ ತಲೆ ತಿರುಗಿ ಬಿದ್ದಿದ್ದು, ಅವರನ್ನು ತಮ್ಮ ವಾಹನದಲ್ಲಿಯೇ ಆಸ್ಪತ್ರೆಗೆ ದಾಖಲಿಸುವ ಮೂಲಕ ನಗರಸಭೆ ಸಿಬ್ಬಂದಿಗಳು ಮಾನವೀಯತೆ ಮೆರೆದಿದ್ದಾರೆ.
ಸುಳ್ಯ ಮರ್ಕಂಜ ನಿವಾಸಿ ಸದಾನಂದ ಎಂಬವರು ಸಂಬಂಧಿಕರೋರ್ವರ ಮನೆಗೆ ಆಗಮಿಸಿದ್ದ ವೇಳೆ ಪುತ್ತೂರು ಮುಖ್ಯ ರಸ್ತೆಯ ಇನ್ ಲ್ಯಾಂಡ್ ಮಯೂರದ ಬಳಿ ತಲೆ ಸುತ್ತು ಬಂದು ಬಿದ್ದಿದ್ದಾರೆನ್ನಲಾಗಿದೆ. ತಕ್ಷಣವೇ ನಗರಸಭೆ ಸಿಬ್ಬಂದಿಗಳು ತಮ್ಮ ವಾಹನದಲ್ಲಿ ಕರೆದುಕೊಂಡು ಬಂದು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಹಿರಿಯ ಆರೋಗ್ಯ ನಿರೀಕ್ಷಕರಾದ ರಾಮಚಂದ್ರ, ಡ್ರೈವರ್ ರಾಧಾಕೃಷ್ಣ, ಪೌರ ಕಾರ್ಮಿಕ ಚಂದ್ರ, ಡ್ರೈವರ್ ವೇಣುಗೋಪಾಲ್ ರವರು ನಗರಸಭೆ ವಾಹನದಲ್ಲಿಯೇ ಸದಾನಂದ ರನ್ನು ಆಸ್ಪತ್ರೆಗೆ ದಾಖಲಿಸಿದ್ದು, ನಗರಸಭೆ ಅಧಿಕಾರಿಗಳ ಈ ಮಾನವೀಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ..