ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಏರುತ್ತಲೇ ಇದೆ. ಸರ್ಕಾರ ಲಾಕ್ಡೌನ್ ಅಸ್ತ್ರವನ್ನು ಪ್ರಯೋಗಿಸಿದ್ದರೂ ಜನರು ಡೋಂಟ್ ಕೇರ್ ಅನ್ನದೇ ಓಡಾಟ ನಡೆಸಿದ್ದಾರೆ. ಕಳೆದ ಹತ್ತು ದಿನಗಳಿಂದ ಲಾಕ್ಡೌನ್ ಇದ್ದರೂ, ಕೊರೊನಾ ಪಾಸಿಟಿವ್ ಪ್ರಕರಣ ಜಾಸ್ತಿಯಾಗುತ್ತಾ ಇತ್ತು. ಆದರೂ ಜನರು ಬುದ್ಧಿಕಲಿಯುವ ಯಾವ ಲಕ್ಷಣವೂ ಕಂಡು ಬಂದಿಲ್ಲ.
ಪೊಲೀಸ್ ಇಲಾಖೆ ಅವರವರ ವ್ಯಾಪ್ತಿ ಪ್ರದೇಶದಲ್ಲಿ ಎಷ್ಟೇ ಎಚ್ಚರ ವಹಿಸಿದರೂ ಜನರ ಅನಗತ್ಯ ಓಡಾಟಕ್ಕೆ ಕಡಿವಾಣ ಬಿದ್ದಿಲ್ಲ. ಆದರೆ ಇದೀಗ ವಿಟ್ಲ ಪೊಲೀಸರು ಖಡಕ್ ನಿರ್ಧಾರ ಕೈಗೆತ್ತಿಕೊಂಡಿದ್ದಾರೆ. ನಾಳೆ ಅನಾವಶ್ಯಕ ಪೇಟೆಗೆ ಬಂದರೆ ಅಂತವರ ವಾಹನ ಜಪ್ತಿ ಮಾಡಲಾಗುತ್ತದೆ. ವಿಟ್ಲಕ್ಕೆ ಮುಖ್ಯವಾಗಿ ನಾಲ್ಕು ಕಡೆಗಳಿಂದ ಸಂಪರ್ಕ ಕಲ್ಪಿಸುವ ಮಾರ್ಗಗಳನ್ನು ಬಂದ್ ಮಾಡಲಾಗುತ್ತದೆ. ಬೊಬ್ಬೆಕೇರಿ, ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ, ಮೇಗಿನಪೇಟೆ, ಸಾಲೆತ್ತೂರು ರಸ್ತೆಯ ಚರ್ಚ್ ಬಳಿ ಚೆಕ್ ಪೋಸ್ಟ್ ಗಳನ್ನು ಹಾಕಲಾಗುತ್ತದೆ.
ಚೆಕ್ ಪೋಸ್ಟ್ ಗಳನ್ನು ಹಾಕಿ ಪೊಲೀಸರನ್ನು ನಿಯೋಜಿಸಿ ತನಿಖೆ ನಡೆಸಿ ಅವಶ್ಯಕತೆ ಇದ್ದಲ್ಲಿ ಮಾತ್ರ ಪೇಟೆಗೆ ಬರಲು ಅವಕಾಶ ಕಲ್ಪಿಸಲಾಗುತ್ತದೆ. ಆಧಾರ್ ಕಾರ್ಡ್ ಪರಿಶೀಲನೆ ನಡೆಸಲಾಗುತ್ತದೆ. ಒಂದು ವೇಳೆ ಅನಗತ್ಯ ಎಂದು ತಿಳಿದುಬಂದಲ್ಲಿ ತಕ್ಷಣವೇ ವಾಹನವನ್ನು ಜಪ್ತಿ ಮಾಡಲಾಗುತ್ತದೆ. “ಅವರವರ ಊರಿನಲ್ಲಿ ಅಗತ್ಯಸೇವೆಗಳಿಗೆ ಅವಕಾಶವಿದೆ. ಅದನ್ನು ಬಿಟ್ಟು ವಿಟ್ಲ ಪೇಟೆಗೆ ಬರಬೇಡಿ. ಬಂದರೆ ವಾಹನ ಜಪ್ತಿ ಮತ್ತು ದಂಡ ಹಾಕಲಾಗುತ್ತದೆ. ನಾಲ್ಕು ಕಡೆಗಳಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗುತ್ತದೆ. ನಾಳೆಯಿಂದಲೇ ಈ ಕಠಿಣ ನಿಯಮ ಜಾರಿಯಾಗಲಿದೆ” ಎಂದು ವಿಟ್ಲ ಠಾಣಾ ಪಿಎಸ್ಐ ವಿನೋದ್ ಕುಮಾರ್ ರೆಡ್ಡಿ ಖಡಕ್ ಸೂಚನೆ ನೀಡಿದ್ದಾರೆ.