ಮಂಗಳೂರು : ಕರಾವಳಿಯಲ್ಲಿ ಬೇಸಿಗೆಯ ತಾಪಮಾನ ದಿನೇದಿನೇ ಹೆಚ್ಚುತ್ತಿದ್ದು, ಏ.30ರವರೆಗೆ ಬಿಸಿಗಾಳಿಯ ಅಲೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ತಿಳಿಸಿದೆ.
ಭಾರತೀಯ ಹವಾಮಾನ ಇಲಾಖೆ ಮುಂದಿನ ಐದು ದಿನಗಳ ಕಾಲ ದಕ್ಷಿಣ ಕನ್ನಡ, ಉಡುಪಿ ಸಹಿತ ಕರ್ನಾಟಕದ ಒಳನಾಡು ಜಿಲ್ಲೆಗಳಲ್ಲಿ ಬಿಸಿಗಾಳಿ ಅಲೆ ಹೆಚ್ಚಾಗಲಿದೆ ಎಂದು ವರದಿ ಮಾಡಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಸಿದೆ.
ಬಿಸಿಗಾಳಿಯಿಂದಾಗಿ ಉಂಟಾಗುವ ಸನ್ ಸ್ಟೋಕ್ ಮತ್ತಿತರ ಸಮಸ್ಯೆಗಳಿಂದ ಪಾರಾಗಲು ಮಧ್ಯಾಹ್ನ 1ರಿಂದ 3ರವರೆಗೆ ಹೊರಗೆ ಹೋಗಬಾರದು, ತೆಳುವಾದ, ಹಗುರವಾದ ಬಟ್ಟೆಗಳನ್ನು ಧರಿಸಬೇಕು. ನಿರ್ಜಲೀಕರಣವಾಗದಂತೆ ತಡೆಯಲು ಆಗಾಗ ನೀರು ಕುಡಿಯುತ್ತಿರಬೇಕು ಎಂದು ಸೂಚನೆ ನೀಡಿದೆ.