ಬೆಳ್ಳಾರೆ : ಜಮೀನು ತಕರಾರು ಹಿನ್ನೆಲೆ ಹಲ್ಲೆ ನಡೆಸಿರುವುದಾಗಿ ಇತ್ತಂಡಗಳು ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸವಣೂರು ಇಡ್ಯಾಡಿ ನಿವಾಸಿ ಗುಣಪಾಲ ಹಾಗೂ ಪ್ರಸಾದ್ ಇಡ್ಯಾಡಿ ಎಂಬವರ ಮಧ್ಯೆ ಕಳೆದ 4 ವರ್ಷಗಳಿಂದ ಜಮೀನಿನ ವಿಚಾರದಲ್ಲಿ ತಕರಾರಿದ್ದು, ಮೇ.27 ರಂದು ರಾತ್ರಿ ಗುಣಪಾಲ ಅವರು ಸವಣೂರಿನಿಂದ ತನ್ನ ಮನೆಯ ಕಡೆಗೆ ಸ್ಕೂಟರಿನಲ್ಲಿ ಹೋಗುತ್ತಾ ತನ್ನ ಮನೆಯ ಬಳಿ ತಲುಪಿದಾಗ, ಮುಂದಿನಿಂದ ಆಟೋ ರಿಕ್ಷಾ ಚಲಾಯಿಸಿಕೊಂಡು ಹೋಗುತ್ತಿದ್ದ ಪ್ರಸಾದ್ ಇಡ್ಯಾಡಿ ಆಟೋರಿಕ್ಷಾವನ್ನು ಸ್ಕೂಟರಿಗೆ ಅಡ್ಡ ಇಟ್ಟು ಅವ್ಯಾಚವಾಗಿ ಬೈದು, ಕೊಲ್ಲುವುದಾಗಿ ಬೆದರಿಸಿ ಆಟೋರಿಕ್ಷಾದಲ್ಲಿದ್ದ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿರುತ್ತಾನೆ.
ಈ ವೇಳೆ ಗಾಯಗೊಂಡು ನೆಲಕ್ಕೆ ಬಿದ್ದ ಗುಣಪಾಲ ಅವರು ಜೋರಾಗಿ ಬೊಬ್ಬೆ ಹೊಡೆದಾಗ ಅಲ್ಲಿಗೆ ಗುಣಪಾಲ ಅವರ ಮಕ್ಕಳಾದ ಮೋಕ್ಷಿತ್, ಭವಿತ್, ರಂಜಿತ್ ಮತ್ತು ನೆರೆಮನೆಯ ಮನೋಹರ ರವರು ಸ್ಥಳಕ್ಕೆ ಬಂದಿದ್ದು, ಪ್ರಸಾದ್ ತನ್ನ ಕೈಯಲ್ಲಿದ್ದ ಬಾಲ್ ಕತ್ತಿಯೊಂದಿಗೆ ಆಟೋರಿಕ್ಷಾದಲ್ಲಿ ಆತನ ಮನೆಯ ಕಡೆಗೆ ಹೋಗಿದ್ದು, ಸ್ವಲ್ಪ ಸಮಯದ ಬಳಿಕ ಪ್ರಸಾದ್ ಇಡ್ಯಾಡಿ, ಬಾಬು ಗೌಡ ಮತ್ತು ಬಾಲಕೃಷ್ಣ ಎಂಬವರು ಸದ್ರಿ ಸ್ಥಳಕ್ಕೆ ವಾಪಾಸ್ಸು ಬಂದಿದ್ದು, ಬಾಲಕೃಷ್ಣ ಎಂಬವರು ಗುಣಪಾಲ ಅವರ ಮಗ ಭವಿತ್ ಗೆ ಜೀವಬೆದರಿಕೆ ಒಡ್ಡಿ ಬಾಲ್ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ. ಹಲ್ಲೆಯನ್ನು ತಡೆಯಲು ಹೋದ ರಂಜಿತ್ ಮತ್ತು ಮನೋಹರಗೂ ಬಾಲ್ ಕತ್ತಿಯು ತಾಗಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಅ.ಕ್ರ:55/2024, ಕಲಂ : 341,504,506,324,307, ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.
ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಸಾದ್ ಇ, ನೀಡಿದ ಪ್ರತಿ ದೂರಿನಂತೆ ಗುಣಪಾಲ, ಮೋಕ್ಷಿತ್, ಚೇತನ್, ಭವಿತ್, ರಂಜಿತ್, ಮನೋಹರ ಎಂಬವರುಗಳು ಸೇರಿ ತನಗೆ ಹಾಗೂ ಸಹೋದರನಾದ ಬಾಲಕೃಷ್ಣ ರವರಿಗೆ ದೊಣ್ಣೆಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿದೆ ದೂರು ನೀಡಿದ್ದು, ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ, ಅ.ಕ್ರ. 56/2024, ಕಲಂ 341, 324ಜೊತೆಗೆ 34 ಐಪಿಸಿ ರಂತೆ ಪ್ರಕರಣ ದಾಖಲಿಸಲಾಗಿದೆ.
ಸದ್ರಿ ಎರಡೂ ಪ್ರಕರಣಗಳು ತನಿಖೆಯಲ್ಲಿರುತ್ತದೆ.