ವಿಟ್ಲ : ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿಗೆ ನುಗ್ಗಿ ಕಳವಿಗೆತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಹೆಚ್.ಇ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡ ಆ.3ರಂದು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಸಕಲೇಶಪುರ ಆನೆ ಮಹಲ್ ನಿವಾಸಿ ಪ್ರಸ್ತುತ ಬೆಳ್ತಂಗಡಿ ತಾಲೂಕು ತಣ್ಣೀರು ಪಂತ ಗ್ರಾಮದ ಹುಣಸೆ ಕಟ್ಟೆ ಯಲ್ಲಿ ವಾಸವಿರುವ ಮಹಮ್ಮದ್ ರವರ ಪುತ್ರ ಅಲ್ತಾಫ್ ಹುಸೈನ್ (೨೯ ವ.), ಸಕಲೇಶ್ ಪುರ ಬೇಲೂರು ರೋಡ್ ನ ಕುಲಗರ ಹಳ್ಳಿ ನಿವಾಸಿ ಎಸ್.ಸಿ. ಮೊಮ್ಮದ್ ರವರ ಪುತ್ರ ಮೊಹಮ್ಮದ್ ಆಸೀಫ್ ( ೨೨ ವ.) ಹಾಗೂ ಸಕಲೇಶ್ ಪುರ ಆನೆಮಹಲ್ ನಿವಾಸಿ ಆನಂದ ರವರ ಪುತ್ರ ಮಾರುತಿ(೨೦ ವ.) ಬಂಧಿತ ಆರೋಪಿಗಳಾಗಿದ್ದಾರೆ.
ಜು.೧೭ರಂದು ಪೆರುವಾಯಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳವಿಗೆತ್ನ ಪ್ರಕರಣ ನಡೆದಿತ್ತು. ಒಳನುಗ್ಗಿದ ಕಳರು ಸಂಘದ ಕಚೇರಿಯೊಳಗಿದ್ದ ಕಪಾಟಿನಲ್ಲಿರಿಸಲಾಗಿದ್ದ ಪುಸ್ತಕಗಳನ್ನು ಚೆಲ್ಲಾಪಿಲ್ಲಿಗೊಳಿಸಿದ್ದರಾದರೂ, ಬೆಲೆಬಾಳುವ ವಸ್ತುಗಳನ್ನು ಕಳವುಗೈಯುವಲ್ಲಿ ವಿಫಲರಾಗಿದ್ದರು. ಈ ಬಗ್ಗೆ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಶೇಖರ ಪೂಜಾರಿಯವರು ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಬಿಸಿದ್ದರು.
ಆರೋಪಿಗಳ ಜಾಡು ಹಿಡದ ಪೊಲೀಸರಿಗೆ ಆ.೩ರಂದು ಆರೋಪಿಗಳು ಮಾಣಿರಸ್ತೆಯಾಗಿ ವಾಹನದಲ್ಲಿ ಬರುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ಪೊಲೀಸರ ತಂಡ ಮಾಣಿ ಸಮೀಪ ಕಾರ್ಯಾಚರಣೆ ನಡೆಸಿತ್ತು. ಈ ಸಂದರ್ಭದಲ್ಲಿ ಆ ದಾರಿಯಾಗಿ ಬೈಕಿನಲ್ಲಿ ಬಂದ ಆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವಿಗೆ ಯತ್ನ ಪ್ರಕರಣ ಬೆಳಕಿಗೆ ಬಂದಿತ್ತು.
ಬಂಧಿತ ಆರೋಪಿಗಳಿಂದ ಕಬ್ಬಿಣ ತುಂಡರಿಸುವ ಕಟ್ಟಿಂಗ್ ಮೆಶಿನ್, ಒಂದು ಸುತ್ತಿಗೆ ಹಾಗೂ ಸಂಚರಿಸುತ್ತಿದ್ದ ಬೈಕ್ ಅನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ಆ.೪ ರಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕರ , ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧಿಕ್ಷಕರ ಮಾರ್ಗದರ್ಶನದಲ್ಲಿ ವಿಟ್ಲ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ನಾಗಾರಾಜ ಹೆಚ್.ಇ., ಎಸ್.ಐ. ಸಂದೀಪ್ ಕುಮಾರ್ ಶೆಟ್ಟಿ , ಪ್ರೊಬೇಷನರಿ ಪಿಎಸ್ಐ ಮಂಜುನಾಥ ಟಿ . ಸಿಬ್ಬಂದಿಗಳಾದ ಜಯರಾಮ ಕೆ.ಟಿ. , ಪ್ರಸನ್ನ ಕುಮಾರ್ , ಪ್ರತಾಪ್ ರೆಡ್ಡಿ , ಹೇಮರಾಜ್ , ವಿನಾಯಕ ಮೊದಲಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ.